ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಮೊದಲು: ಸಿಎಂ
ಬೆಂಗಳೂರು, ಮೇ. 6 : ತೆರಿಗೆ ಸಂಗ್ರಹದಲ್ಲಿ ಇಡೀ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿ ಇದ್ದರೂ ವರಮಾನ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. 2008-09ನೇ ಸಾಲಿನ ತೆರಿಗೆ ವರಮಾನದಲ್ಲಿ ಸುಮಾರು 4359 ಕೋಟಿ ಕೊರತೆ ಉಂಟಾಗಿದೆ ಎಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಹಣಕಾಸು ಇಲಾಖೆ ಪ್ರಗತಿ ಪರಿಶೀಲನೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರ ಮಾತನಾಡಿದರು. ರಾಜ್ಯ ಒಟ್ಟು ಆಂತರಿಕ ಉತ್ಪನ್ನದ ಆದಾಯದಲ್ಲಿ ಶೇ.11.5 ರಷ್ಟು ತೆರಿಗೆ ಸಂಗ್ರಹಿಸಲಾಗಿದೆ. ಈ ರೀತಿಯ ತೆರಿಗೆ ಸಂಗ್ರಹಿಸುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಆಂಧ್ರಪ್ರದೇಶ ಇದ್ದು, ಅಲ್ಲಿ ಶೇ.10 ರಷ್ಟು ತೆರಿಗೆ ಸಂಗ್ರಹಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
2008-09 ನೇ ಸಾಲಿನಲ್ಲಿ ರಾಜ್ಯ ಸರಕಾರ ತನ್ನ ಸ್ವಂತ ತೆರಿಗೆ ಮೂಲಗಳಿಂದ ಒಟ್ಟು 26,906 ಕೋಟಿ ರುಪಾಯಿ ಸಂಗ್ರಹಿಸಿದೆ. ಆದರೆ, ಗುರಿ ಇದ್ದದ್ದು 31,265 ಕೋಟಿ ರುಪಾಯಿ ಸಂಗ್ರಹಿಸಲು, ಆದರೂ 2007-08 ನೇ ಸಾಲಿಗೆ ಹೋಲಿಸಿದಲ್ಲಿ ಶೇ.6 ರಷ್ಟು ಹೆಚ್ಚು ತೆರಿಗೆ ಬಂದಿದೆ ಎಂದು ಅವರು ಹೇಳಿದರು.
ಇಷ್ಟಾದರೂ ನಿರೀಕ್ಷಿತ ಪ್ರಮಾಣದ ತೆರಿಗೆ ಸಂಗ್ರಹಿಸಲು ಆಗುತ್ತಿಲ್ಲ. ಇದಕ್ಕೆ ಕಾರಣ ವಿಶ್ವ ಆರ್ಥಿಕ ಹಿಂಜರಿತ, ಮೋಟಾರು ವಾಹನ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸಂಗ್ರಹದಲ್ಲಿ ಇಳಿಕೆ ಆಗಿರುವುದೂ ವರಮಾನ ಕೊರತೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಮಾಡಿಕೊಂಡು ಹೆಚ್ಚು ವರಮಾನ ಸಂಗ್ರಹಿಸುವ ಕಡೆಗೆ ಗಮನ ನೀಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications