ಭಾರತಕ್ಕೆ ಕಾಲಿಡಲು ತವಕಿಸುತ್ತಿರುವ ಎಲ್ ಟಿಟಿಇ ?
ನವದೆಹಲಿ, ಏ. 29 : ನೆರೆಯ ಶ್ರೀಲಂಕಾದಲ್ಲಿ ಭಯೋತ್ಪಾದಕ ಸಂಘಟನೆ ಎಲ್ ಟಿಟಿಇ ತನ್ನ ನೆಲೆ ಕಳೆದುಕೊಳ್ಳುತ್ತಿರುವ ಬೆನ್ನಲ್ಲೇ ಭಾರತಕ್ಕೆ ಹೊಸ ಆತಂಕವನ್ನು ತಂದೊಡ್ಡಿದೆ. ಲಂಕಾ ಸರಕಾರದ ಸೇನಾ ಕಾರ್ಯಾಚರಣೆಯಲ್ಲಿ ಮೂಲೆಗುಂಪಾಗುತ್ತಿರುವ ಎಲ್ ಟಿಟಿಇ ಸಂಘಟನೆ ಭಾರತದಲ್ಲಿ ತನ್ನ ಗೂಡು ಕಟ್ಟುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಕೇಂದ್ರವನ್ನು ಸರಕಾರವನ್ನು ಎಚ್ಚರಿಸಿದೆ.
ಅಳಿದುಳಿದ ಎಲ್ ಟಿಟಿಇ ಬಂಡುಕೋರರನ್ನು ಬಗ್ಗುಬಡಿಯಲು ಲಂಕಾ ಸೇನೆ ಮುನ್ನುಗ್ಗುತ್ತಿರುವಾಗಲೇ ಭಾರತದಲ್ಲಿ ಎಲ್ ಟಿಟಿಇ ಭಯೋತ್ಪಾದಕ ಕೃತ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸುವ ಸಾಧ್ಯತೆ ಇದೆ ಎಂದು ಕೂಡಾ ಇಲಾಖೆ ತಿಳಿಸಿದೆ. ಒಂದೆಡೆ ಎಲ್ ಟಿಟಿಇ ಬೆದರಿಕೆ ಕ್ರಮಕೈಗೊಳ್ಳುವ ಹಂತದಲ್ಲಿಯೇ, ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಉಗ್ರರ ನುಸುಳುವಿಕೆಯೂ ಕಳೆದ 13 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ.
ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್ ಬಗ್ಗೆ ಮತ್ತು ಆತನ ಬಳಿ ಇರುವ ಆಪ್ತರ ಬಗ್ಗೆ ಬಾರತ ಸರಕಾರದ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಮೂಲಗಳು ತಿಳಿಸಿವೆ. ಭಾರತ ಸರಕಾರದ ಬಳಿ ಲಭ್ಯ ಮಾಹಿತಿ ಪ್ರಕಾರ, ಎಲ್ ಟಿಟಿಇ ನಿಯಂತ್ರಣದ ಪ್ರದೇಶದಿಂದ 1.65 ಲಕ್ಷದಷ್ಟು ತಮಿಳು ನಿರಾಶ್ರಿತರು ಪರಿಹಾರ ಶಿಬಿರಕ್ಕೆ ಆಗಮಿಸಿದ್ದಾರೆ. ಇನ್ನೂ 5 ರಿಂದ 20 ಸಾವಿರದಷ್ಟು ತಮಿಳರು ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆಂದು ಅಂದಾಜಿಸಲಾಗಿದೆ. ದೇಶದಲ್ಲಿ ಲೋಕಸಭೆ ಚುನಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಎಲ್ ಟಿಟಿಇ ಉಗ್ರರು, ಪಾಕಿ ಉಗ್ರರು ತೀವ್ರ ತಲೆನೋವಾಗಿ ಪರಿಣಮಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಉಗ್ರ ಪ್ರಭಾಕರನ್ ಭಾರತಕ್ಕೆ ಹಸ್ತಾಂತರ : ಲಂಕಾ











Click it and Unblock the Notifications