ಯಡಿಯೂರಪ್ಪ ಮೇಲೆ ಚಪ್ಪಲಿ ಎಸೆಯಲು ಯತ್ನ
ಬೆಂಗಳೂರು, ಏ. 28 : ರಾಜಕಾರಣಿಗಳ ಮೇಲೆ ಬೂಟು ಮತ್ತು ಚಪ್ಪಲಿ ಎಸೆಯುವ ದುಷ್ಕತ್ಯಗಳು ಮುಂದುವರೆಯುತ್ತಿರುವ ಬೆನ್ನಲ್ಲೇ ಇಂದು ಚೆನ್ನರಾಯಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಸಮಾವೇಶದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೆಡೆಗೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆಯಲು ವಿಫಲ ಯತ್ನ ನಡೆಸಿ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ಕೋಡಿಹಳ್ಳಿಯ ಚಂದ್ರಶೇಖರ್ ಎಂಬ ಭೂಪ ಮುಖ್ಯಮಂತ್ರಿಗಳಿಗೆ ಚಪ್ಪಲಿ ಎಸೆಯಲು ಮುಂದಾಗಿದ್ದ ವ್ಯಕ್ತಿಯಾಗಿದ್ದಾನೆ. ಚುನಾವಣೆಯ ಅಂತಿಮ ದಿನವಾದ ಇಂದು ಎಲ್ಲ ರಾಜಕೀಯ ಮುಖಂಡರು ಮತದಾರರ ಮನವೊಲಿಸಲು ಹರಸಾಹಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚೆನ್ನರಾಯಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಯಡಿಯೂರಪ್ಪ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಕೋಡಿಹಳ್ಳಿ ನಿವಾಸಿ ಚಂದ್ರಶೇಖರ್ ಎಂಬಾತ ಚಪ್ಪಲಿ ಎಸೆಯಲು ಯತ್ನಿಸಿದ್ದಾನೆ. ತಕ್ಷಣ ಜಾಗೃತರಾದ ಪೊಲೀಸರು ಚಪ್ಪಲಿ ತೂರುವ ಆತನ ಯತ್ನ ವಿಫಲಗೊಳಿಸಿ, ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರಿಂದ ಆರಂಭವಾದ ಈ ಪಾದರಕ್ಷೆಗಳ ಹೋರಾಟ ಮುಖ್ಯಮಂತ್ರಿ ಯಡಿಯೂರಪ್ಪವರೆಗೂ ನಿರಂತರವಾಗಿ ನಾಗಾಲೋಟದಲ್ಲಿ ಸಾಗಿದೆ. ಎಲ್ ಕೆ ಅಡ್ವಾಣಿ, ಗೃಹ ಸಚಿವ ಪಿ ಚಿದಂಬರಂ, ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಬಾಲಿವುಡ್ ನಟ ಜಿತೇಂದ್ರ, ರಾಜ್ಯಸಭಾ ಸದಸ್ಯ ನವೀನ ಜಿಂದಾಲ್ ಮೇಲೆ ಬೂಟು ಹಾಗೂ ಚಪ್ಪಲಿಯನ್ನು ಎಸೆದ ಪ್ರಕರಣಗಳು ಈಗಾಗಲೇ ಜರುಗಿದ್ದು, ನೂತನವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೆಸರು ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿತು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು
ಚಪ್ಪಲಿ ಎಸೆತ ಕುರಿತಂತೆ ಒಂದು ಹಾಸ್ಯ ಲೇಖನ











Click it and Unblock the Notifications