ಕೋಲ್ತತಾ ನೈಟ್ ರೈಡರ್ಸ್ ತಂಡದಲ್ಲಿ ಬಿರುಗಾಳಿ

ಸತತ ಸೋಲುಗಳಿಂದ ಕಂಗೆಟ್ಟಿರುವ ಮತ್ತು ಪಾತಾಳ ಮುಟ್ಟಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದಿಂದ ಒಂದೇ ಮೆಟ್ಟಿಲು ಮೇಲಿರುವ ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲೆದ್ದಿರುವ ಬಿರುಗಾಳಿಯನ್ನು ಗಮನಿಸಿದರೆ ಮೇಲಿನ ಅನುಮಾನ ಸಹಜವಾಗಿ ಬರುತ್ತದೆ.
ಐಪಿಎಲ್ ಮೊದನೇ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಖಾನ್ ತಂಡ ಐಪಿಎಲ್ ಪ್ರಾರಂಭವಾಗುವ ಮೊದಲೇ ವಿವಾದದ ಕೇಂದ್ರಬಿಂದುವಾಗಿತ್ತು. ಬಹುನಾಯಕತ್ವದ ಅಳವಡಿಕೆಯ ವಿಚಾರವೆತ್ತಿ ಸುನೀಲ್ ಗಾವಸ್ಕರ್ ಅವರಂಥ ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ನಂತರ ಸೌರವ್ ಗಂಗೂಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ನ್ಯೂಜಿಲೆಂಡಿನ ಬ್ರೆಂಡನ್ ಮೆಕಲಮ್ ಅವರನ್ನು ನಾಯಕನನ್ನಾಗಿ ಮಾಡಿದ್ದರೂ ಅದರ ಅದೃಷ್ಟ ಖುಲಾಯಿಸಿಲ್ಲ.
ಈಗ, ಆಲ್ ರೌಂಡರಾದ ಸಂಜಯ್ ಬಂಗಾರ್ ಮತ್ತು ಆಕಾಶ್ ಚೋಪ್ರಾ ಅವರನ್ನು 'ಅವರು ತಂಡದಲ್ಲಿ ಆಡಲು ಲಾಯಕ್ಕಿಲ್ಲ' ಎಂಬ ಕಾರಣ ನೀಡಿ ಸೀದ ಮನೆಗಟ್ಟಿದೆ. ಇಬ್ಬರಿಗೂ ಹೆಚ್ಚಿನ ಪಂದ್ಯಗಳನ್ನಾಡುವ ಅವಕಾಶವನ್ನೂ ಮ್ಯಾನೇಜ್ ಮೆಂಟ್ ನೀಡಿಲ್ಲ. ಆಟವಾಡದೆ ಸುಮ್ಮನೆ ಬೆಂಚನ್ನು ಸವೆಸುವ ಬದಲು ಮನೆಗೆ ಮರಳುವುದೇ ಮೇಲು ಎಂದು ಹೇಳಿ ಅವರನ್ನು ಭಾರತಕ್ಕೆ ಮರಳಿಸಿದೆ.
ಆಕಾಶ್ ಚೋಪ್ರಾ ಅವರನ್ನು ಕಿತ್ತುಹಾಕಿರುವುದು ತಂಡದಲ್ಲಿಯೇ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ಯಾಕೆಂದರೆ, ಟೀಮ್ ಕೋಚ್ ಬುಚನನ್ ಮತ್ತು ನಾಯಕ ಮೆಕಲಮ್ ಅವರು ಆಕಾಶ್ ಚೋಪ್ರಾ ಅವರ ಬಗ್ಗೆ ಅಪಾರ ಮೆಚ್ಚುಗೆಯ ಮಳೆ ಸುರಿಸಿದ್ದರು. ಐದನ್ ಸ್ಥಾನದಲ್ಲಿ ಆಡುತ್ತಿರುವ ಚೋಪ್ರಾ ತಂಡದ ಪ್ರಮುಖ ಆಟಗಾರ ಎಂದು ಹಾಡಿ ಹೊಗಳಿದ್ದರು.
ತಂಡದಲ್ಲಿನ ಆಂತರಿಕ ಕೊಳಕುಗಳನ್ನು ಹೊರಗೆಳೆದು ಬ್ಲಾಗ್ ಒಂದರಲ್ಲಿ ಪ್ರಕಟಿಸುತ್ತಿದ್ದ ವಿವಾದ ಈ ಹೊಸ ವಿವಾದಕ್ಕೆ ನಾಂದಿ ಹಾಡಿದೆ ಎಂದು ಶಂಕಿಸಲಾಗಿದೆ. ಒಟ್ಟಿನಲ್ಲಿ, ಹಿರಿಯ ಆಟಗಾರರಿಗೂ ತಂಡದಲ್ಲಿ ಯಾವುದೇ ಕಿಮ್ಮತ್ತಿಲ್ಲದಂತಾಗಿದೆ. ವಿಜಯ್ ಮಲ್ಯ ಒಡೆತನದ ರಾಯಲ್ಸ್ ಚಾಲೇಂಜರ್ಸ್ ಬೆಂಗಳೂರು ತಂಡದ ಸ್ಥಿತಿ ಕೂಡ ಭಿನ್ನವಾಗೇನೂ ಇಲ್ಲ. ರಾಹುಲ್ ದ್ರಾವಿಡರನ್ನು ಕಳೆಗಿಳಿಸಿ ಕೆವಿನ್ ಪೀಟರ್ಸನ್ ಅವರನ್ನು ಪಟ್ಟಕ್ಕೇರಿಸಿದರೂ ಅಂತಿಮ ಪರಿಣಾಮದಲ್ಲಿ ವ್ಯತ್ಯಾಸವಾಗೇನೂ ಇಲ್ಲ. ರಾಯಲ್ಸ್ ತಂಡದಲ್ಲಿಯೂ ನೈಟ್ ರೈಡರ್ಸ್ ತಂಡದಂತೆಯೇ ಬದಲಾವಣೆಗಳಾದರೂ ಆಶ್ಚರ್ಯವಿಲ್ಲ.
(ದಟ್ಸ್ ಕ್ರಿಕೆಟ್ ವಾರ್ತೆ)












Click it and Unblock the Notifications