ತಮಿಳರ ಮೇಲೆ ದಾಳಿ ಖಂಡಿಸಿ ಕರುಣಾನಿಧಿ ಉಪವಾಸ
ಚೆನ್ನೈ, ಏ. 27 : ನಿಷೇಧಿತ ಭಯೋತ್ಪಾದಕ ಸಂಘಟನೆ ಹಾಗೂ ಭಾರತದ ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಅವರನ್ನು ಛಿದ್ರ ಛಿದ್ರಗೊಳಿಸಿದ ಎಲ್ ಎಲ್ ಟಿಟಿಇ ಸಂಘಟನೆ ಪರವಾಗಿ ತಮಿಳುನಾಡು ಸರಕಾರ ಹೋರಾಟ ಆರಂಭಿಸಿದೆ. ಇಷ್ಟು ದಿನ ಕೇಂದ್ರ ಮೇಲೆ ಸಾಕಷ್ಟು ಒತ್ತಡ ಹೇರಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೇಂದ್ರದ ಧೋರಣೆ ಹಾಗೂ ಲಂಕಾದಲ್ಲಿ ಎಲ್ ಟಿಟಿಇ ಮೇಲೆ ನಡೆಯುತ್ತಿರುವ ಮಾರಣಹೋಮ ಖಂಡಿಸಿ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಇಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಎಲ್ಟಿಟಿಇ ವಿರುದ್ಧ ಶ್ರೀಲಂಕಾ ಸೇನೆ ನಡೆಸುತ್ತಿರುವ ದಾಳಿಯನ್ನು ಈ ಕೂಡಲೇ ನಿಲ್ಲಸಬೇಕು ಎಂದು ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ ಅವರ ಸ್ಮಾರಕಕ್ಕೆ ತೆರಳಿ, ಶ್ರೀಲಂಕಾದಲ್ಲಿ ಕದನ ವಿರಾಮ ಘೋಷಿಸಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ. ಕದನ ವಿರಾಮ ಘೋಷಿಸಲು ಶ್ರೀಲಂಕಾ ಸರಕಾರಕ್ಕೆ ಒತ್ತಡ ಹೇರಬೇಕೆಂದು ಕರುಣಾನಿಧಿ, ಕೇಂದ್ರ ಸರಕಾರಕ್ಕೆ ಕೆಲ ದಿನಗಳ ಹಿಂದೆ ತಂತಿ ಸಂದೇಶ ಮೂಲಕ ಒತ್ತಡ ಹೇರಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ನಾನೂ ಸಹ ಶ್ರೀಲಂಕ ಸರಕಾರದ ಬಲಿಪಶುವಾಗಲು ತಯಾರಿದ್ದೇನೆ, ಶ್ರೀಲಂಕಾ ಅಧ್ಯಕ್ಷ ರಾಜಪಕ್ಷೆ ನನ್ನನ್ನೂ ಸಾಯಿಸಲಿ ಎಂದು ಈ ಸಂದರ್ಭದಲ್ಲಿ ನುಡಿದರು.
ಡಿಎಂಕೆ ನಾಯಕರುಗಳು, ಅವರ ಪುತ್ರಿ ಕನಿಮೋಳಿ ಹಾಗೂ ಮೊಮ್ಮಗ ದಯಾನಿಧಿ ಮಾರನ್ ಮು೦ತಾದವರು ಉಪವಾಸ ಸ್ಥಳಕ್ಕೆ ಧಾವಿಸಿದ್ದಾರೆ. ಕರುಣಾನಿಧಿಯವರ ಏಕಾಏಕಿ ಉಪವಾಸದ ಸುದ್ದಿ ಕೇಳುತ್ತಲೇ, ಉಪವಾಸ ಹಿಂತೆಗೆಯಲು ಕೇಂದ್ರ ಸರ್ಕಾರ ಮನವಿ ಮಾಡಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರು ಕರುಣಾನಿಧಿ ಅವರೊಂದಿಗೆ ಮಾತನಾಡಿದ್ದಾರೆಂದು ತಿಳಿದುಬಂದಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications