ರೋಮ್ ರಾಜ್ಯ ಕಟ್ಟಲು ಕಾಂಗ್ರೆಸ್ಸಿಗರು ಯತ್ನ:ಅನಂತ್

ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಪರ ಗದಗ-ಬೇಟಗೇರಿಯಲ್ಲಿ ಪ್ರಚಾರ ನಡೆಸಿದ ಅನಂತಕುಮಾರ್ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದರು. ಕಾಂಗ್ರೆಸ್ಸಿಗರು ದಿಕ್ಕೆಟ್ಟಿದ್ದಾರೆ. ಅವರಿಗೆ ಇಂತಹ ದುಃಸ್ಥಿತಿ ಬರಬಾರದಿತ್ತು. ಆಮದು ರಾಜಕಾರಣಕ್ಕೆ ಇಳಿದಿದ್ದಾರೆ. ಹಾವೇರಿಯಲ್ಲಿ ಸೂಕ್ತ ಸಿಗದೇ ಮಂಗಳೂರಿನ ವ್ಯಕ್ತಿಯನ್ನು ಆಮದು ಮಾಡಿಕೊಂಡರು. ಹಾವೇರಿಯ ಕತೆ ಬಿಡಿ, ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನೇ ಆಮದು ಮಾಡಿಕೊಂಡಿರುವುದು ಕಾಂಗ್ರೆಸ್ ಅಧೋಗತಿಗೆ ಇಳಿದಿರುವುದನ್ನು ಬಿಂಬಿಸುತ್ತದೆ ಎಂದು ಅವರು ಗೇಲಿ ಮಾಡಿದರು.
ಧರ್ಮಸಿಂಗ್-ಖರ್ಗೆ ಜೋಡಿಯನ್ನು ಸಂಗ್ಯಾಬಾಳ್ಯಾ ಜೋಡಿಗೆ ಹೋಲಿಸಿದ ಅನಂತಕುಮಾರ್, ಅವರು ಜೆಡಿಎಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದನ್ನು ಚಿತ್ರಗೀತೆಗೆ ಹೋಲಿಸಿದರು. ಕಾಂಗ್ರೆಸ್ ಹೊರಗೆಲ್ಲಾ ನಾನೊಂದು ತೀರ, ನೀನೊಂದು ತೀರ ಎಂದು ಹೇಳುತ್ತಿದೆ. ಇನ್ನು ಜೆಡಿಎಸ್ ವರಿಷ್ಠ ದೇವೇಗೌಡರು, ಹತ್ತಿರ ಹತ್ತಿರ ಬಾ... ಇನ್ನು ಹತ್ತಿರ ಬಾ ಎಂದು ಪ್ರಣಯ ಗೀತೆ ಹಾಡುತ್ತಿದ್ದಾರೆಂದು ಹೇಳಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು. ಸಿದ್ದರಾಮಯ್ಯ ಅವರ ಪಾಡು ನೋಡಿ ಅಯ್ಯೋ ಅನಿಸುತ್ತಿದೆ. ದೇವೇಗೌಡರು ಕೈಕೊಟ್ಟರು. ಕೈ ಹಿಡಿದು ಕರೆದುಕೊಂಡು ಹೋಗಿದ್ದ ಕಾಂಗ್ರೆಸ್ ಪಕ್ಷ ಕೂಡಾ ಕೈಕೊಟ್ಟಿತು ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications