ಅನಿಲ್ ಅಂಬಾನಿ ಹತ್ಯೆಗೆ ಸಂಚು ?
ಘಟನೆ ಕುರಿತು ಆಘಾತ ವ್ಯಕ್ತಪಡಿಸಿರುವ ಅನಿಲ್ ಅಂಬಾನಿ ಒಡೆತನದ ಎಡಿಎಜಿ ಕಂಪನಿ ಉದ್ಯಮದಲ್ಲಿನ ಹಗೆತನವೇ ಇದಕ್ಕೆ ಕಾರಣ ಎಂದು ಆರೋಪಿಸಿದೆ. ಪ್ರಕರಣದ ಎಡಿಎಜಿ ಹಾಗೂ ಕ್ಯಾಪ್ಟರ್ ನಿರ್ವಹಣೆಯ ಹೊಣೆ ಹೊತ್ತಿದ್ದ ಏರ್ ವರ್ಕ್ಸ್ ಸಂಸ್ಥೆ ದೂರು ದಾಖಲಿಸಿದೆ. ಅನಿಲ್ ಅಂಬಾನಿ 13 ಸೀಟು ಸಾಮರ್ಥ್ಯದ ಬೆಲ್ 412 ಎಂಬ ಕ್ಯಾಪ್ಟರ್ ಹೊಂದಿದ್ದಾರೆ. ಅದು ಅವರ ಸ್ವಂತದ್ದು, ಇದರ ನಿರ್ವಹಣೆಯನ್ನು ಮುಂಬೈನ ಏರ್ ವರ್ಕ್ಸ್ ಸಂಸ್ಥೆ ಹೊತ್ತಿದೆ. ಈ ಕ್ಯಾಪ್ಟರ್ ನಲ್ಲಿ ಅನಿಲ್ ಪ್ರತಿ ಗುರುವಾರ, ಶುಕ್ರವಾರ ಹಾಗೂ ಶನಿವಾರ ಮುಂಬೈ ಹೊರವಲಯದ ನಾವಿ ಮುಂಬೈನಲ್ಲಿರುವ ನಾಲೆಡ್ಜ್ ಸಿಟಿಗೆ ಅಧಿಕಾರಿಗಳೊಂದಿಗೆ ತೆರಳುತ್ತಾರೆ.
ಶುಕ್ರವಾರ ಎಂಗಿನಂತೆ ಅನಿಲ್ ಅಂಬಾನಿ ಹೋಗಬೇಕಿದ್ದರಿಂದ ಮುಂಬೈ ವಿಮಾನ ನಿಲ್ದಾಣದಲ್ಲಿದ್ದ ಕ್ಯಾಪ್ಟರ್ ಅನ್ನು ಅಣಿಗೊಳಿಸಲು ಸೂಚಿಸಲಾಗಿದೆ. ಆದರೆ, ಗುರುವಾರ ಸಂಜೆ ಕ್ಯಾಪ್ಟರ್ ಅನ್ನು ಏರ್ ವರ್ಕ್ಸ್ ಸಂಸ್ಥೆಯ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಅದರಲ ಇಂಧನ ಟ್ಯಾಂಕ್ ನಲ್ಲಿ ಕೆಂಪು ಮರಳು ಮತ್ತು ಕಲ್ಲು ಪತ್ತೆಯಾಗಿದೆ. ಈ ಕೆಂಪು ಮರಳು ಇಂಧನದ ಜೊತೆ ಸೇರಿದಾಕ್ಷಣ ಗಟ್ಟಿಯಾಗುತ್ತದೆ, ಒಂದು ವೇಳೆ ಕ್ಯಾಪ್ಟರ್ ಇದೇ ಸ್ಥಿತಿಯಲ್ಲಿ ಹಾರಾಟ ನಡೆಸಿದ್ದರೆ ಇಂಧನ ಟ್ಯಾಂಕ್ ನಲ್ಲಿದ್ದ ಮರಳು ಎಂಜಿನ್ ಗೆ ಹೋಗಿ ಕ್ಯಾಪ್ಟರ್ ಆಗಸದಲ್ಲೇ ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚಾಗಿತ್ತು ಎಂದು ಮೂಲಗಳು ತಿಳಿಸಿವೆ.
(ಏಜೆನ್ಸೀಸ್)