ಸಿಓಡಿ ತನಿಖೆ : 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಬೆಂಗಳೂರು, ಏ. 22: ಸಿ.ಓ.ಡಿ. ತನಿಖೆ ಮಾಡಿದ ಸಾಮೂಹಿಕ ಹತ್ಯೆ ಪ್ರಕರಣ ಒಂದರಲ್ಲಿ ಬಿಜಾಪುರದ ಒಂದನೇ ತ್ವರಿತ ನ್ಯಾಯಲಯವು 11 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ದಿನಾಂಕ 31-09-2001ರಂದು ಬಿಜಾಪುರ ಜಿಲ್ಲೆಯ ಹಾಸಂಗಿಹಾಳ್ ಕ್ರಾಸ್ ಬಳಿ ಗುಗ್ಗೇರಿ ಕುಟುಂಬಕ್ಕೆ ಸೇರಿದ ಹಲವಾರು ಜನರು ತಮ್ಮ ವಿರೋಧಿಗಳಾದ ಭೀಮಣ್ಣ ಸುಂಬದ್ ಹಾಗೂ ಅವರ ಕುಟುಂಬದವರ ಮೇಲೆ ಬಸ್ನಲ್ಲಿಯೇ ಹಲ್ಲೆ ಮಾಡಿ ಅವರಿಗೆ ಗುಂಡು ಹಾರಿಸಿದಾಗ ಸುಂಬದ್ ಕುಟುಂಬದ ಇತರರು ಬಸ್ನಿಂದ ಇಳಿದು ಓಡಿ ಹೋಗುತ್ತಿರುವಾಗ ಅವರನ್ನು ಬೆನ್ನುಹತ್ತಿ ಹೋದ ಆರೋಪಿಗಳು ಹಾದಿಯಲ್ಲೇ ಅವರನ್ನು ಕೊಲೆ ಮಾಡಿರುತ್ತಾರೆ.
ಈ ಪ್ರಕರಣದಲ್ಲಿ ಸುಂಬದ್ ಕುಟುಂಬದ ಒಟ್ಟು 5 ಜನ ಸತ್ತಿದ್ದು, ಈ ಪ್ರಕರಣದ ತನಿಖೆಯನ್ನು ಸಿಓಡಿ ಕೈಗೊಂಡಿತ್ತು. ಆರೋಪಿಗಳು ಕಂಟ್ರಿ ಪಿಸ್ತೂಲ್ ಹಾಗೂ ಇತರ ಮಾರಕಾಸ್ತ್ರಗಳನ್ನು ಉಪಯೋಗಿಸಿರುತ್ತಾರೆ. ಈ ಭೀಕರ ಸಾಮೂಹಿಕ ಹತ್ಯೆಗೆ ಸುಂಬದ್ ಕುಟುಂಬ ಹಾಗೂ ಗುಗ್ಗೇರಿ ಕುಟುಂಬಗಳ ಮಧ್ಯೆ ಇರುವ ವೈಷಮ್ಯವೇ ಕಾರಣವಾಗಿದ್ದು, ಈ ಎರಡೂ ಕುಟುಂಬಗಳ ಮೇಲೆ ಕೇಸು ಹಾಗೂ ಪ್ರತಿ ಕೇಸುಗಳು ದಾಖಲಾಗಿದ್ದವು. ಡಿಎಸ್ಪಿ ಗುಟಿಮನಿ ಹಾಗೂ ಪಿಐ ಇರ್ಶಾದ್ ಖಾನ್ ತನಿಖೆಯನ್ನು ನಡೆಸಿದ್ದು, ನ್ಯಾಯಾಲಯದಲ್ಲಿ ವಿಶೇಷ ಅಭಿಯೋಜನಕರಾಗಿ ವಿ.ಕೆ. ಮಾನೆ ಅವರು ಪ್ರಕರಣವನ್ನು ನಡೆಸಿರುತ್ತಾರೆ. ತನಿಖಾಧಿಕಾರಿಗಳಿಗೆ ಹಾಗೂ ವಿಶೇಷ ಅಭಿಯೋಜಕರಿಗೆ ಬಹುಮಾನವನ್ನು ಘೋಷಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications