ರೆಡ್ಡಿ ಬಳಿ ಇರುವ ಹಣದ ತನಿಖೆ ಆಗಲಿ : ಎಚ್ಡಿಕೆ
ಬೆಂಗಳೂರು, ಏ. 21 : ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಎಂದಿನಂತೆ ಇಂದು ಕೂಡಾ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಸಚಿವ ಜನಾರ್ದನರೆಡ್ಡಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ದೇವೇಗೌಡರ ಮನೆಯಲ್ಲಿ ಸಾಕಷ್ಟು ಕಪ್ಪು ಹಣವಿದೆ ಎಂಬ ರೆಡ್ಡಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕುಮಾರಸ್ವಾಮಿ, ರೆಡ್ಡಿ ಬಳಿ ಇರುವ ಹಣವೆಲ್ಲಾ ಬೆವರು ಹರಸಿ ದುಡಿದಿರುವುದೇ. ಅವರ ಬಳಿ ಇರುವ ದುಡ್ಡಿನ ಬಗ್ಗೆ ಸೂಕ್ತ ತನಿಖೆ ನಡೆಸುವ ಅಗತ್ಯವಿದೆ ಎಂದು ಅವರು ಆಗ್ರಹಿಸಿದ್ದಾರೆ.
ಎಡಿಟರ್ ಗಿಲ್ಡ್ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಯಥಾ ಪ್ರಕಾರ ರಾಜ್ಯ ಬಿಜೆಪಿ ಸರಕಾರ ಹಾಗೂ ಎನ್ ಡಿಎ ಒಕ್ಕೂಟವನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ಸಾಧನೆ ಎಂದರೆ, ಆಪರೇಷನ್ ಕಮಲದ ಮೂಲಕ ಅನ್ಯ ಪಕ್ಷಗಳ ಶಾಸಕರನ್ನು ಕೋಟ್ಯಂತರ ಹಣ ಕೊಟ್ಟು ಖರೀದಿ ಮಾಡಿರುವುದೇ ಈವರೆಗಿನ ಅವರ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು.
ಬಿಜೆಪಿ ಪಕ್ಷ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಅಧಿಕಾರ ಯಂತ್ರವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಮೈಸೂರು ನಗರ ಪಾಲಿಕೆ ಸರಕಾರಿ ವಾಹನಗಳು ಬಿಜೆಪಿ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಈ ಬಗ್ಗೆ ರಾಜ್ಯ ಚುನಾವಣೆ ಆಯೋಗ ಯಾವುದೇ ಕ್ರಮ ಕೈಗೊಳ್ಳದಿರುವುದು ಅನೇಕ ಗುಮಾನಿಗೆ ಕಾರಣವಾಗಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಮತ ಪಡೆಯುವುದಕ್ಕೆ ಬಿಜೆಪಿ ಸರಕಾರ ಸರಕಾರಿ ಖಜಾನೆಯ ರೊಕ್ಕ ತೆಗೆದುಕೊಂಡು ಜಾಹಿರಾತು ನೀಡಿದೆ. ಪ್ರಚಾರಕ್ಕೂ ಕೋಟ್ಯಂತರ ಹಣವನ್ನು ವ್ಯಯಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣ ದೇಶ ತರುವ ಮಾತನಾಡುತ್ತಿರುವ ಎಲ್ ಕೆ ಅಡ್ವಾಣಿ ಅವರು ಎನ್ ಡಿಎ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ಏನು ಮಾಡುತ್ತಿದ್ದರು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications