ಮೊದಲ ಹಂತದ ಪ್ರಚಾರಕ್ಕೆ ಏ.21ರಂದು ತೆರೆ
ಬೆಂಗಳೂರು, ಏ. 21 : ರಾಜ್ಯದಲ್ಲಿ ಏಪ್ರಿಲ್ 23 ರಂದು ನಡೆಯಲಿರುವ 17 ಲೋಕಸಭೆ ಕ್ಷೇತ್ರದ ಬಹಿರಂಗ ಪ್ರಚಾರ ಕಾರ್ಯಕ್ಕೆ ಇಂದು ಅಂತಿಮ ತೆರೆಬಿದ್ದಿತು. 17 ಲೋಕಸಭೆ ಕ್ಷೇತ್ರಗಳಲ್ಲಿ 273 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
ಮೊದಲ ಹಂತದ ಮತದಾನದಲ್ಲಿ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ (ಬೆಂಗಳೂರು ಗ್ರಾಮಾಂತರ), ಎನ್ ಧರಂಸಿಂಗ್ (ಬೀದರ್), ಎಂ ವೀರಪ್ಪ ಮೊಯ್ಲಿ (ಚಿಕ್ಕಬಳ್ಳಾಪುರ) ಹಾಗೂ ಕೆ ಎಚ್ ಮುನಿಯಪ್ಪ (ಕೋಲಾರ) ಸೇರಿದಂತೆ ಎಂಟು ಮಂದಿ ಹಾಲಿ ಸಂಸದರು ಮತ್ತೆ ಮರು ಆಯ್ಕೆ ಬಯಸಿ ಕಣದಲ್ಲಿದ್ದಾರೆ.
ಕರ್ನಾಟಕ ಸದ್ಯ ಬಿಜೆಪಿ ಪಕ್ಷದ ತವರು ನೆಲೆ ಎಂದೇ ಪರಿಚಿತವಾಗಿದ್ದು. ದಕ್ಷಿಣ ಭಾರತದ ಕರ್ನಾಟಕದ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರ ಹಿಡಿದಿದ್ದು, ಪಕ್ಷಕ್ಕೆ ಈ ಚುನಾವಣೆ ಅಗ್ನಿಪರೀಕ್ಷೆಯೇ ಆಗಿದೆ. ತನ್ನ ನೆಲೆಯನ್ನು ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ ಮತ್ತೆ ತನ್ನ ಅಧಿಪತ್ಯ ಸ್ಥಾಪಿಸಲು ಭಾರಿ ಹರಸಾಹಸ ನಡೆಸಿದೆ.
ಎಲ್ ಕೆ ಅಡ್ವಾಣಿ, ನರೇಂದ್ರ ಮೋದಿ, ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್, ಸೋನಿಯಾ ಗಾಂಧಿ, ಗುಲಾಮ್ ನಬಿ ಅಜಾದ್, ಎಚ್ ಡಿ ದೇವೇಗೌಡ, ಎನ್ ಚಂದ್ರಬಾಬು ನಾಯ್ಡು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅನೇಕ ಘಟಾನುಘಟಿ ನಾಯಕರುಗಳು ಹಗಲು ಇರುಳು ಎನ್ನದೆ ಪ್ರಚಾರ ಕಾರ್ಯ ನಡೆಸಿದ್ದಾರೆ. ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ವಿವಿಧ ವೇಷ ಭೂಷಣಗಳನ್ನು ಧರಿಸಿ ಮತ ಕೇಳುವ ಮೂಲಕ ಜನರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications