ಧರ್ಮಾಂಧ ಬಿಜೆಪಿಗೆ ಬುದ್ಧ ಕಲಿಸಿ: ಕೃಷ್ಣ ಮನವಿ
ಬೆಂಗಳೂರು, ಏ. 14 : ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿರುವ ಬಿಜೆಪಿ ನಾಯಕರಿಗೆ ಚುನಾವಣೆಯಲ್ಲಿ ಪಾಠ ಕಲಿಸಿ ಎಂದು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಕರೆ ನೀಡಿದರು.
ಹೆಬ್ಬಾಳ ಪ್ರದೇಶದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ ಕೆ ಜಾಫರ್ ಷರೀಫ್ ಪರ ಸೋಮವಾರ ಪ್ರಚಾರ ನಡೆಸಿದ ಅವರು, ಧರ್ಮಗಳ ನಡುವೆ ಸಾಮರಸ್ಯ ಕಾಪಾಡುವ ಬದಲಿಗೆ ಬಿಜೆಪಿ ಸರ್ಕಾರ ಕಿಚ್ಚು ಹತ್ತಿಸಿ, ಅಶಾಂತಿ ಉಂಟು ಮಾಡುತ್ತಿದೆ ಎಂದು ಆಪಾದಿಸಿದರು. ಆಪರೇಷನ್ ಕಮಲದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೃಷ್ಣ, ರಾಜಕಾರಣಕ್ಕೆ ಇದೊಂದು ಕಪ್ಪುಚುಕ್ಕೆ ಎಂದು ಟೀಕಿಸಿದರು. ಇಂಥ ಧೌರ್ಬಾಗ್ಯವನ್ನು ತಮ್ಮ ಸುದೀರ್ಘ ರಾಜಕೀಯ ಬದುಕಿನಲ್ಲಿ ಹಿಂದೆಂದೂ ಕಂಡಿಲ್ಲ ಎಂದ ಕೃಷ್ಣ, ಬೆಂಗಳೂರು ವಿಶ್ವಮಾನ್ಯತೆ ಪಡೆಯಲು ಕಾಂಗ್ರೆಸ್ ಸರ್ಕಾರ ಕಾರಣ ಎಂದು ಅವರು ಹೇಳಿದರು.
ಮನಮೋಹನ್ ಸಿಂಗ್ ಅಸಮರ್ಥ ಪ್ರಧಾನಿ ಅಲ್ಲ. ತಾವು ಅರ್ಹ ಮತ್ತು ಪ್ರಾಮಾಣಿಕ ಎಂದು ಅವರು ಈಗಾಗಲೇ ಸಾಬೀತುಪಡಿಸಿದ್ದಾರೆ. ಇಡೀ ವಿಶ್ವವೇ ಭಾರತವನ್ನು ಬೆರಗುಗಣ್ಣಿನಿಂದ ನೋಡಿದ್ದು, ಸಿಂಗ್ ಅಧಿಕಾರಾವಧಿಯಲ್ಲೇ ಎಂದು ಕೃಷ್ಣ ಬಣ್ಣಿಸಿದರು. ದೇಶವನ್ನು ಶಾಂತಿ ಹಾಗೂ ಸಾಮರಸ್ಯದಿಂದ ಕೊಂಡೊಯ್ಯುವುದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಈ ದಿಸೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications