ಗಣಿಧಣಿಗಳ ಹೇಳಿಕೆಗೆ ದೇವೇಗೌಡ ತೀವ್ರ ವಿರೋಧ
ಹಾವೇರಿ, ಏ. 13 : ಹೋರಾಟಕ್ಕೆ ಹೆಸರುವಾಸಿಯಾಗಿರುವ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಅವರು ರಾಜಕೀಯ ಜೀವನದಲ್ಲಿ ತಮಗೆ ಎದುರಾದ ವಿರೋಧಿಗಳನ್ನು ಮಣಿಸುತ್ತಲೇ ಬಂದಿದ್ದಾರೆ. ಅವರ ಹೊಡೆತಕ್ಕೆ ಸೋತು ಸುಣ್ಣವಾಗಿರುವ ಅನೇಕ ಮುಖಂಡರುಗಳು ನಮ್ಮ ಕಣ್ಮುಂದೆ ಇದ್ದಾರೆ. ಇಂಥ ಎದೆಗಾರಿಕೆ ಇರುವ ಗೌಡರಿಗೆ ಹೋರಾಟ ಸಾಕು ಎನಿಸಿದೆಯಾ ? ಗೊತ್ತಿಲ್ಲ.
ಬ್ಯಾಡಗಿ ಪಟ್ಟಣದಲ್ಲಿ ಹಾವೇರಿ ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಕುಮಾರಗೌಡ ಪಾಟೀಲ್ ಪರ ಪ್ರಚಾರ ಸಭೆ ಭಾಗವಹಿಸಿದ ಗೌಡರು, ಮಾತೆತ್ತಿದರೆ ಜೆಡಿಎಸ್ ಸತ್ತಿದೆ. ಸಂಸ್ಕಾರ ಮಾಡುತ್ತೇವೆ, ತಿಥಿ ಮಾಡುತ್ತೇವೆ ಎಂದು ಹೆದರಿಸುವ ಬಳ್ಳಾರಿ ಗಣಿಧಣಿಗಳನ್ನು ಕಂಡು ಭಯವಾಗಿದೆ. ಇಂತವರ ವಿರುದ್ಧ ಪಕ್ಷದ ಅಭ್ಯರ್ಥಿಗಳ ಪಾಡೇನು ? ಈ ಹಿನ್ನೆಲೆಯಲ್ಲಿ ಪಕ್ಷ ಅಭ್ಯರ್ಥಿಗಳನ್ನು ನಿಲ್ಲಿಸಿಲ್ಲ ಎಂದು ಮನಸ್ಸಿಗೆ ನಾಟುವಂತ ಹೇಳಿಕೆ ನೀಡಿದ್ದಾರೆ.
ದೇಶದ ಖನಿಜ ಸಂಪತ್ತನ್ನು ಅವ್ಯಾಹತವಾಗಿ ಲೂಟಿ ಮಾಡುತ್ತಿರುವ ಗಣಧಣಿಗಳ ಹಣದ ಮದ ಇಂತಹ ದುರಹಂಕಾರದ ಮಾತುಗಳನ್ನಾಡಿಸುತ್ತಿದೆ. ಇದನ್ನೇ ಒಳಒಪ್ಪಂದ ಅನ್ನುವುದಾದರೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು. ತಮ್ಮ ಸಾಧನೆಗಳ ಜಪ ಸಾಕು ಮುಂದೇನು ಎಂದು ತೋಚದೆ ಕಾಂಗ್ರೆಸ್ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿವೆ ಎಂದು ಕ್ಷುಲ್ಲಕ ಆರೋಪ ಮಾಡುವವರ ಬಗ್ಗೆ ನಾನೇನು ಪ್ರತಿಕ್ರಿಯಿಸಲಿ ಎಂದ ಮಾಜಿ ಪ್ರಧಾನಿ, ಬಳ್ಳಾರಿಯಲ್ಲಿ ನಿತ್ಯ ದೊರೆಯುತ್ತಿರುವ ಅಕ್ರಮ ಹಣದ ಬಗ್ಗೆ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು











Click it and Unblock the Notifications