ಹಳೆ ಮುದುಕಿಗೆ ಚಿರಯುವಕ ಸಿದ್ದು ಕ್ಯಾಪ್ಟನ್?

*ಮೃತ್ಯುಂಜಯ ಕಲ್ಮಠ

Siddaramaiah may appoint for Kharge's post
ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸತತ ಎರಡು ವರ್ಷಗಳ ಹೋರಾಟ, ಮುಸುಕಿನ ಗುದ್ದಾಟ, ಮುನಿಸಿಕೊಂಡು ರೆಸಾರ್ಟ್ ಗಳ ಗುಪ್ತಸಭೆ ಹಾಗೂ ಸ್ಥಳೀಯ ಮುಖಂಡರ ಕೈಗೆ ಸಿಗದಿರುವ ನಾಟಕಕ್ಕೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಂಡು ಬಂದಿವೆ. ಪ್ರತಿಪಕ್ಷ ಸ್ಥಾನ ನೀಡದಿದ್ದರೆ ಚುನಾವಣೆ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಸೆಡವು ಮಾಡಿಕೊಂಡು ಸಿಟ್ಟಿನಿಂದ ಗುಡುಗಿದ್ದ ಸಿದ್ದುಗೆ ಕಾಂಗ್ರೆಸ್ ಹೈಕಮಾಂಡ್ ಡೊಗ್ಗಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಂದ ರಾಜೀನಾಮೆ ಪಡೆದುಕೊಂಡಿರುವ ಸುದ್ದಿಗಳು ನವದೆಹಲಿ ಕಾಂಗ್ರೆಸ್ ಕಚೇರಿಯಿಂದ ದಂಡಿದಂಡಿಯಾಗಿ ಬಂದಿವೆ.

ಗುಲ್ಬರ್ಗಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಒಲ್ಲದ ಮನಸ್ಸಿನಿಂದ ಪ್ರತಿಪಕ್ಷದ ಮುಖಂಡ ಸ್ಥಾನದ ರಾಜೀನಾಮೆ ಪತ್ರವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಗುಲಾಮ್ ನಬಿ ಅಜಾದ್ ಅವರಿಗೆ ರವಾನಿಸಿದ್ದಾರೆ. ಏಪ್ರಿಲ್ 16 ರಂದು ಕಾಂಗ್ರೆಸ್ ಪಕ್ಷದ ಮುಖಂಡರು ಸಭೆ ಸೇರಿ ಶಾಸಕಾಂಗ ಸಭೆ ಕರೆಯುವ ದಿನಾಂಕವನ್ನು ನಿಗದಿಪಡಿಸುವ ಸಾಧ್ಯತೆಗಳಿವೆ. ಲೋಕಸಭೆ ಚುನಾವಣೆಗಳು ಇರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳ ಮೊದಲ ವಾರದಲ್ಲಿ ಶಾಸಕಾಂಗ ಸಭೆ ಕರೆದು ಸಿದ್ದರಾಮಯ್ಯ ಅವರನ್ನು ಸರ್ವಾನುಮತದಿಂದ ಪ್ರತಿಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವ ಸಂಭವವಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರೆತಿಲ್ಲ ಎಂದು ಸಿದ್ದು, ಕಾಂಗ್ರೆಸ್ ಪಕ್ಷದ ಕೈಬಿಡಲು ತಯಾರಿ ನಡೆಸಿದ್ದರು. ಗೋವಾ, ಕಾರವಾರ, ಬೆಳಗಾವಿ ಹೈದರಾಬಾದ್ ಹೀಗೆ ಅನೇಕ ಕಡೆಗಳಲ್ಲಿ ಬೆಂಬಲಿಗರೊಂದಿಗೆ ಗುಪ್ತಸಭೆ ನಡೆಸಿ ಕಾಂಗ್ರೆಸ್ ಪಕ್ಷಕ್ಕೆ ಏಟು ನೀಡುವ ಬಗ್ಗೆ ಚರ್ಚೆ ನಡೆಸಿದ್ದರು. ಹೈಕಮಾಂಡ್ ಸೂಚನೆ ಮತ್ತು ಸ್ಥಳೀಯ ಮುಖಂಡರ ಗೋಗರೆತ ಕಂಡ ಸಿದ್ದು ಅನಿವಾರ್ಯವಾಗಿ ಕೈ ಪಕ್ಷದಲ್ಲಿ ತಳವೂರಬೇಕಾಯಿತು. ಸದ್ಯದ ರಾಜಕೀಯ ಸ್ಥಿತಿಯಲ್ಲಿ ಸಿದ್ದುಗೆ ಕಾಂಗ್ರೆಸ್ ಪಕ್ಷ ಅನಿವಾರ್ಯ ಕೂಡಾ ಆಗಿತ್ತು.

ಕಳೆದ ಉಪಚುನಾವಣೆಯ ಸಂದರ್ಭದಲ್ಲಿ ಮುನಿಸಿಕೊಂಡಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಪರ ಚುನಾವಣೆ ಪ್ರಚಾರಕ್ಕೆ ತೆರಳಿರಲಿಲ್ಲ. ಈ ಕ್ರಮದಿಂದಾಗಿ ಸಿದ್ದು, ಕೆಲ ಗಂಭೀರ ಆರೋಪಗಳನ್ನು ಎದುರಿಸಬೇಕಾಯಿತು. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಂತೂ ಸಿದ್ದರಾಮಯ್ಯ ಅವರನ್ನು ತೀವ್ರವಾಗಿ ಕುಟುಕಿದ್ದರು. ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸೋಲಿಸಲು ಬಿಜೆಪಿಯೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಯಃಕಚಿತ್ ಪ್ರತಿಪಕ್ಷದ ನಾಯಕನ ಸ್ಥಾನಕ್ಕಾಗಿ ಹೈಕಮಾಂಡ್ ಗೆ ಸಲಾಮು ಹೊಡೆಯುವಂತ ದುರ್ಗತಿ ಸಿದ್ದರಾಮಯ್ಯ ಅವರಿಗೆ ಬರಬಾರದಿತ್ತು ಎಂದು ಕುಮಾರಸ್ವಾಮಿ, ದೇವೇಗೌಡ, ರೇವಣ್ಣ ಏಕಕಾಲದಲ್ಲಿ ದಾಳಿ ಮಾಡಿ ಮುಗಿಸಿದ್ದರು.

ಅಷ್ಟಾದರೂ ಸಹನೆ ಕಳೆದುಕೊಳ್ಳದ ಸಿದ್ದು, ಕಾಂಗ್ರೆಸ್ ಪಕ್ಷ ಸೇರಿ ಮೂರು ವರ್ಷಕ್ಕೂ ಅಧಿಕ ದಿನಗಳ ಕಾಲ ತಮ್ಮ ಒಡಲಾಳದ ನೋವನ್ನು ಅದುಮಿಟ್ಟುಕೊಂಡು ಬಂದಿದ್ದರು. ಒಂದು ಕಾಲನ್ನು ಹೊರಗಿಟ್ಟು ಕಾಂಗ್ರೆಸ್ ಪಕ್ಷದೊಂದಿಗೆ ವ್ಯವಹಾರ ಶುರುವಿಟ್ಟುಕೊಂಡಿದ್ದ ಸಿದ್ದು, ಎರಡು ದಿನಗಳ ಹಿಂದಷ್ಟೇ ಮತ್ತೊಮ್ಮೆ ಗುಟುರು ಹಾಕಿದ್ದರು. ಸ್ಥಾನಮಾನ ನೀಡಿ, ಇಲ್ಲದಿದ್ದರೆ ಸ್ಪಷ್ಟವಾಗಿ ಆಗುವುದಿಲ್ಲ ಎಂದು ಹೇಳಿ ಎಂಬ ಸಂದೇಶವನ್ನು ಸೋನಿಯಾ ಗಾಂಧಿ ಅವರಿಗೆ ರವಾನಿಸಿದ್ದರು.

ಸಿದ್ದುಗೆ ಸ್ಥಾನ ನೀಡುವ ಸಲುವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುಲ್ಬರ್ಗಾ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಿದ ಸೋನಿಯಾಗಾಂಧಿ, ಆ ಸ್ಥಾನಕ್ಕೆ ಸಿದ್ದು ನೇಮಿಸುವ ಐಡಿಯಾ ಮಾಡಿ ಅದರಲ್ಲಿ ಯಶ ಕಂಡಿದೆ. ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ ನೀಡಿರುವುದಕ್ಕೆ ಸಂತಸಗೊಂಡಂತಿರುವ ಸಿದ್ದರಾಮಯ್ಯ, ಶನಿವಾರ ಗುಲ್ಬರ್ಗಾ ಜಿಲ್ಲೆಯ ಜೀವರ್ಗಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪ್ರಚಾರ ಕಾರ್ಯದಲ್ಲಿ ಯಡಿಯೂರಪ್ಪ, ಎಲ್ ಕೆ ಅಡ್ವಾಣಿ, ಎನ್ ಡಿಎ, ಸಂಘ ಪರಿವಾರ, ಅದರ ಅಂಗ ಸಂಘಟನೆಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ ದೃಶ್ಯ ಕಂಡುಬಂದಿತು. ಸಿದ್ದು ನೇತೃತ್ವದ ಹಳೆ ಮುದುಕಿ ಕಾಂಗ್ರೆಸ್ ಪಕ್ಷ (ನರೇಂದ್ರ ಮೋದಿ ಹೇಳಿಕೆ) ಹದಿನೇಳರ ಬಾಲೆಯಾಗುವಳೆ ? ಲೋಕಸಭೆ ಚುನಾವಣೆಯಲ್ಲಿ ಮತದಾರರನ್ನು ಒಲಿಸಿಕೊಳ್ಳುವಳೆ ? ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+