ಕಾಂಗ್ರೆಸ್ ನಿಂದ ದೇಶ ನಿರ್ನಾಮ ಸದಾನಂದಗೌಡ ಟೀಕೆ
ಹಾಸನ, ಏ. 7 : ಪ್ರಸ್ತುತ ಲೋಕಸಭೆ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಪರಸ್ಪರ ವೈಯಕ್ತಿಕ ನಿಂದನೆಗೆ ಇಳಿದಿರುವುದು ಸಾರ್ವಜನಿಕರಿಗೆ ಮನರಂಜನೆ ತಂದುಕೊಟ್ಟಿದೆ ಎಂದೇ ಹೇಳಬಹುದು. ಕಾಗೋಡು ತಿಮ್ಮಪ್ಪ, ರೇಣುಕಾಚಾರ್ಯ, ಸಿಟಿ ರವಿ ಒಂದು ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದರೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಹಿರಿಯ ನಾಯಕರನ್ನು ಮುದಿ ಎತ್ತುಗಳು ಎಂದು ಹೀಯಾಳಿಸಿದ್ದು ಆಯಿತು.
ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಅವರ ಸರದಿ. ಹಾಸನದ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಸದಾನಂದಗೌಡ ಕಾಂಗ್ರೆಸ್ ನಾಯಕರನ್ನು ಮನಬಂದಂತೆ ನಿಂದಿಸಿದ್ದಾರೆ. ಮುಖ್ಯವಾಗಿ ಎಸ್ ಬಂಗಾರಪ್ಪ, ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಅವರ ವಯಸ್ಸಿಗೆ ಸಂಬಂಧಿಸಿ ಕಟುಕಿರುವ ಗೌಡ, ಇವರಿಂದ ದೇಶ ನಿರ್ಮಾಣ ಆಗುವುದಿಲ್ಲ, ನಿರ್ನಾಮ ಆಗಲಿದೆ ಎಂದು ಲೇವಡಿ ಮಾಡಿದರು.
ಮಾತು ಮುಂದುವರಿಸಿದ ಸದಾನಂದಗೌಡ,ಧರಂಸಿಂಗ್ ಮತ್ತು ಖರ್ಗೆ ಅವರಿಗೆ ಕುಳಿತರೆ ಎಳಕ್ಕಾಗಲ್ಲ, ನಿಂತರೆ ಕೂರಕ್ಕಾಗಲ್ಲ. ಅವರನ್ನು ನಡೆಸೋಕೆ ಜನ ಬೇಕು, ಇನ್ನು ಈ ನಾಯಕರು ದೇಶ ಮುನ್ನಡೆಸುತ್ತಾರಾ ಎಂದು ಗೌಡ ಪ್ರಶ್ನಿಸಿದರು. ಸಿಕೆ ಜಾಫರ್ ಷರೀಫ್ ಅವರಿಗೆ ಗಡ್ಡ ಕೆರೆದುಕೊಳ್ಳೋಕೇ ಆಗಲ್ಲ. ಬಂಗಾರಪ್ಪ ಅವರಿಗೆ ಕೂಲಿಂಗ್ ಗ್ಲಾಸ್ ಇಲ್ದೆ ಜನರನ್ನು ನೋಡೋಕ್ಕಾಗಲ್ಲ. ಅವರಿಗೆ ಈಗ ಕನ್ನಡಕ ಹಾಕೋದಿಕ್ಕೂ ಜನ ಬೇಕಾಗಿದ್ದಾರೆ ಎಂದು ಗೌಡ ವೈಯಕ್ತಿಕವಾಗಿ ನಿಂದಿಸಿದರು. ಕಥೆ ಬರೆಯುವ ಮೊಯ್ಲಿ ಈಗ ಮಂಗಳೂರಿನಲ್ಲಿ ಎಲೆಕ್ಷನ್ ಗೆ ನಿಂತು ಕಥೆ ಬರೆಯೋಕ್ಕಾಗಲ್ಲ ಎಂದು ಚಿಕ್ಕಬಳ್ಳಾಪುರಕ್ಕೆ ಹೋಗಿದ್ದಾರೆ. ಈಗ ಅಲ್ಲಿ ಅವರ ಬಗ್ಗೆ ಕಥೆ ಬರೆಯುವ ಸ್ಥಿತಿ ಉಂಟಾಗಿದೆ ಎಂದು ಲೇವಡಿ ಮಾಡಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications