ಮೈಸೂರಿನಲ್ಲಿ ಪ್ರಮೋದ್ ಮುತಾಲಿಕ್ ಬಂಧನ
ಮೈಸೂರು, ಏ. 6 : ಇತ್ತೀಚೆಗೆ ಕೋಮುಗಲಭೆಯಿಂದ ತಲ್ಲಣಿಸಿದ್ದ ಕ್ಯಾತಮಾರನಹಳ್ಳಿ ಭೇಟಿ ನೀಡಲು ತೆರಳುತ್ತಿದ್ದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಅವರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಅವರನ್ನು ಬಂಧಿಸಲಾಗಿದೆ.
ಇತ್ತೀಚೆಗೆ ಕ್ಯಾತಮಾರನಹಳ್ಳಿಯಲ್ಲಿ ಎರಡು ಕೋಮಿನ ನಡುವೆ ಗಲಭೆ ಉಂಟಾಗಿತ್ತು. ದೇವಸ್ಥಾನಗಳ ಮೇಲೆ ದಾಳಿ ಸಹ ನಡೆದಿತ್ತು. ಇದರಿಂದ ಈ ಪ್ರದೇಶದಲ್ಲಿ ಉಂಟಾಗಿದ್ದ ತ್ವೇಷಮಯ ಇನ್ನೂ ವಾತಾವರಣ ಆರಿಲ್ಲ. ಬೂದಿ ಮುಚ್ಚಿದ ಕೆಂಡದಂತಿರುವ ಪ್ರದೇಶಕ್ಕೆ ಮುತಾಲಿಕ್ ಭೇಟಿ ನೀಡಿದರೆ ಇನ್ನಷ್ಟು ಅವಘಡ ಸಂಭವಿಸಬಹುದು ಎಂದು ಪೊಲೀಸರು ಮುಂಜಾಗ್ರತಾ ಕ್ರಮ ಅವರನ್ನು ಬಂಧಿಸಿದ್ದಾರೆ. ಅಲ್ಲದೇ ಕ್ಯಾತಮಾರನಹಳ್ಳಿಯಲ್ಲಿ ಇಂದೂ ಕೂಡಾ 144 ಕಲಂ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಮ್ಮ ಬಂಧನಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪ್ರಮೋದ್ ಮುತಾಲಿಕ್, ಘಟನಾ ಸ್ಥಳದಲ್ಲಿ ಕಲಂ 144 ಜಾರಿಯಲ್ಲಿದೆ ಎಂದು ತಿಳಿಸಿದ್ದರೆ ಅಲ್ಲಿಗೆ ತೆರಲುವ ಕಾರ್ಯಕ್ರಮ ಹಾಕಿಕೊಳ್ಳುತ್ತಿರಲಿಲ್ಲ. ಅಲ್ಲದೇ, ಭೇಟಿಗೆ ಸಂಬಂಧಿಸಿಂದಂತೆ ಮುಂಚಿತವಾಗಿ ಮೈಸೂರು ಪೊಲೀಸರಿಗೆ ತಿಳಿಸಿದ್ದೆ. ಇಷ್ಟಾದರೂ ಕೂಡಾ ನನ್ನನ್ನು ಏಕಾಏಕಿ ಬಂಧಿಸಿರುವ ಕ್ರಮ ಸಂವಿಧಾನ ವಿರೋಧಿ ಕೆಲಸ ಎಂದು ಕಿಡಿಕಾರಿದ್ದಾರೆ.
ಗಲಭೆಯಿಂದ ನೊಂದಿರುವ ಹಿಂದೂ ಕುಟುಂಬಗಳಿಗೆ ಸಾಂತ್ವನ ಹೇಳಲು ಅಲ್ಲಿಗೆ ತೆರಳುತ್ತಿರುವುದಾಗಿ ಹೇಳಿದ, ಅವರು, ಭಾರತದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಿದ್ದರೆ ಹೇಗೆ, ಇಷ್ಟೆಲ್ಲಾ ಅನ್ಯಾಯ ನಡೆದಿದೆ, ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ದೇವಾಲಯಗಳ ದಾಳಿ ಆಗಿವೆ. ಇಷ್ಟಾದರೂ ಗಲಭೆ ಪೀಡಿತರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ. ಹಿಂದೂ ಪರ ಸಂಘಟನೆ ಮುಖ್ಯಸ್ಥನಾದ ನಾನು ಹಿಂದೂಗಳಲ್ಲಿ ಸೂಕ್ತ ರಕ್ಷಣೆ ನೀಡುವುದರ ಜೊತೆಗೆ ವಿಶ್ವಾಸ ತುಂಬಲು ಅಲ್ಲಿಗೆ ತೆರಳುತ್ತಿದ್ದಾಗ ಪೊಲೀಸರು ಬಂಧಿಸಿರುವುದು ಸಂಪೂರ್ಣ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಕ್ಯಾತಮಾರನಹಳ್ಳಿಯಲ್ಲಿ ನಿಷೇಧಾಜ್ಞೆ ಜಾರಿ












Click it and Unblock the Notifications