ಟಿವಿ 9ಗೆ ರಾಮನಾಥ ಗೋಯಂಕಾ ಪ್ರಶಸ್ತಿ ಘೋಷಣೆ
ಬೆಂಗಳೂರು, ಏ. 3 : ಅತೀ ಕಡಿಮೆ ಅವಧಿಯಲ್ಲಿ ತಾಜಾ ಸುದ್ದಿಗಳನ್ನು ಪ್ರಸಾರ ಮಾಡುತ್ತ ಕನ್ನಡಿಗರ ಮನೆಮಾತಾಗಿರುವ ಟಿವಿ 9 ಕನ್ನಡ ವಾರ್ತಾವಾಹಿನಿಗೆ ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿ ಎಂದೇ ಪರಿಗಣಿಲ್ಪಟ್ಟಿರುವ ರಾಮನಾಥ್ ಗೋಯಂಕಾ ಪ್ರಶಸ್ತಿ ಲಭಿಸಿದೆ. ಪತ್ರಕರ್ತ ಎಂ ಎಸ್ ರಾಘವೇಂದ್ರ ನೇತೃತ್ವದ "ವಾರೆಂಟ್ " ಕಾರ್ಯಕ್ರಮದ ತನಿಖೆ ವರದಿಗೆ ಈ ಪ್ರಶಸ್ತಿ ಲಭಿಸಿದೆ.
ಹುಬ್ಬಳ್ಳಿಯಲ್ಲಿ ಅವ್ಯಾಹತವಾಗಿ ನಡೆದಿದ್ದ ಮಹಿಳೆಯರ ಮಾರಾಟ ಜಾಲವನ್ನು ಪತ್ತೆ ಹಚ್ಚಿ ವರದಿ ಮಾಡಿದ್ದಕ್ಕೆ ಅತ್ಯುತ್ತಮ ಪ್ರಾದೇಶಿಕ ವಾಹಿನಿ ಪ್ರಶಸ್ತಿ ಎಂಬ ಪ್ರಶಸ್ತಿಯನ್ನು ಟಿವಿ9 ಮುಡಿಗೇರಿಸಿಕೊಂಡಿದೆ. ಜೊತೆಗೆ ತೆಲುಗು ಟಿವಿ 9 ವಾರ್ತಾವಾಹಿನಿಗೂ 'ನವೀನ' ಎಂಬ ಮಹಿಳೆ ಕಾರ್ಯಕ್ರಮಕ್ಕೆ ಪ್ರಶಸ್ತಿ ಗೋಯಂಕಾ ಪ್ರಶಸ್ತಿ ಸಿಕ್ಕಿದೆ.
ಪತ್ರಿಕೋದ್ಯಮದ ದಿಗ್ಗಜ ಎಂದೇ ಖ್ಯಾತಿಯಾಗಿರುವ ರಾಮನಾಥ ಗೋಯಂಕಾ ಅವರ ಹೆಸರಿನಲ್ಲಿ ಪತ್ರಿಕೋದ್ಯಮದಲ್ಲಿ ಗಮನಾರ್ಹ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಗೋಯಂಕಾ ಬಿಹಾರದ ಧರ್ಬಾಂಗ್ ಜಿಲ್ಲೆಯವರು. ನಂತರ ಚೈನ್ನೈನಲ್ಲಿ ಬಂದು ನೆಲೆಸಿದರು. ತಮ್ಮ ಒಡೆತನದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಎಂಬ ಇಂಗ್ಲಿಷ್ ದೈನಿಕಯನ್ನು ಹೊರತಂದರು.
ನಂತರ ದಿನಗಳಲ್ಲಿ ಪ್ರಾದೇಶಿಕ ಭಾಷೆಯ ಪತ್ರಿಕೆಗಳು ಹೊರತಂದಿರುವುದು ಇವರ ಹೆಗ್ಗಳಿಕೆ. ಇಂದಿಗೂ ಕೂಡಾ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಗೋಯಂಕಾ ಒಡೆತನದ ಪತ್ರಿಕೆಗಳು ಜನಸಾಮಾನ್ಯರ ಜೀವನಾಡಿಯಾಗಿವೆ. ಶ್ರೇಷ್ಠ ಪತ್ರಕರ್ತರಾಗಿದ್ದ ರಾಮನಾಥ್ ಗೋಯಂಕಾ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಅವರು ವಿರುದ್ಧ ಸೆಡ್ಡು ನಿಂತವರಲ್ಲಿ ಇವರು ಒಬ್ಬರು. ಧೀರೂಭಾಯಿ ಅಂಬಾನಿ ಅವರ ಆಪ್ತರಾಗಿದ್ದ ಗೋಯೆಂಕಾ ನಂತರ ಅವರ ಕಂಪೆನಿ ವಿರುದ್ಧ ಹರಿತವಾಗಿ ಲೇಖನ ಬರೆದವರು. ಉತ್ತಮ ವಾಗ್ಮಿಗಳಾಗಿದ್ದ ಅವರು ರಾಮಮನೋಹರ್ ಲೋಹಿಯಾ, ಜಯಪ್ರಕಾಶ ನಾರಾಯಣ ಅವರಂಥ ಮಹನೀಯರ ನಿಕಟವರ್ತಿಗಳಾಗಿದ್ದರು.
ಜನಸಂಘದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಗೋಯಂಕಾ ಅವರು 1971ರಲ್ಲಿ ಮಧ್ಯಪ್ರದೇಶದ ವಿದಿಶಾ ಲೋಕಸಭೆ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು. ಇದೀಗ ವಿದಿಶಾ ಕ್ಷೇತ್ರದಿಂದ ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ ಸುಷ್ಮಾ ಸ್ವರಾಜ್ ಕಣಕ್ಕಿಳಿಯಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications