ಭಾಗಮಂಡಲದಲ್ಲೀಗ ಹಬ್ಬದ ವಾತಾವರಣ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಭಾಗಮಂಡಲ ಗ್ರಾಮ ಪಂಚಾಯತ್, ಸ್ತ್ರೀ ಶಕ್ತಿ ಗುಂಪುಗಳು, ನಗರಸಭೆ, ಸ್ಥಳೀಯರು ಹಾಗೂ ದೇವಾಲಯ ಸಮಿತಿಯ ಸದಸ್ಯರ ಸಹಕಾರದಿಂದ ಭಗಂಡೇಶ್ವರ ದೇವಾಲಯ ಪುನರ್ ಪ್ರತಿಷ್ಠಾಪನಾ ಸಿದ್ದತಾ ಕಾರ್ಯಗಳು ಸಜ್ಜುಗೊಂಡಿವೆ ಎಂದು ದೇವಾಲಯ ಪುನರ್ ಪ್ರತಿಷ್ಠಾಪನಾ ಸಮಿತಿಯ ಕಾರ್ಯಾಧ್ಯಕ್ಷರಾದ ಮಾತಂಡ ಮೊಣ್ಣಪ್ಪ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಎಂ.ಕೆ.ಬಲದೇವಕೃಷ್ಣ ಅವರ ನಿರ್ದೇಶನದಂತೆ ಭಗಂಡೇಶ್ವರ ದೇವಾಲಯ ಹಾಗೂ ತ್ರಿವೇಣಿ ಸಂಗಮ ಸುತ್ತಮುತ್ತ ಶುಚಿತ್ವಕ್ಕೆ ಹೆಚ್ಚಿನ ಗಮನ ನೀಡಲಾಗಿದ್ದು, ಈಗಾಗಲೇ ಎಲ್ಲಾ ಗಿಡ ಗಂಟೆಗಳು ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ವಸ್ತುಗಳನ್ನು ತೆಗೆಸಿ ಪರಿಸರ ಸ್ವಚ್ಚಗೊಳಿಸಲಾಗಿದೆ. ಪ್ಲಾಸ್ಟಿಕ್ ಚೀಲಗಳನ್ನು ಬಳಸದೇ ಬಟ್ಟೆ ಬ್ಯಾಗ್ಗಳನ್ನು ಬಳಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹಾಗೆಯೇ ಶುದ್ದ ಕುಡಿಯುವ ನೀರು, ವೈದ್ಯಕೀಯ ಸೇವೆ, ಶೌಚಾಲಯ ವ್ಯವಸ್ಥೆ ಹಾಗೂ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಏಪ್ರಿಲ್ 2 ರಿಂದ 14 ರವರೆಗೆ ಪ್ರಾಣಿ ವಧೆ, ಮಾಂಸ ಮಾರಾಟವನ್ನು ಹಾಗೂ ಏಪ್ರಿಲ್ 11ರಂದು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ದೇವಾಲಯ ಪುನರ್ ಪ್ರತಿಷ್ಠಾಪನಾ ಸಮಿತಿಯ ಕಾರ್ಯಾಧ್ಯಕ್ಷರು ವಿವರಿಸಿದರು.
ಭಗಂಡೇಶ್ವರ ದೇವಾಲಯ ಪುನರ್ ಪ್ರತಿಷ್ಠಾಪನಾ ದಿನಗಳಂದು ದೇವಾಲಯ ಸುತ್ತಮುತ್ತಲಿನ ಅಂಗಡಿಗಳು ದೀಪಾಲಂಕಾರದಿಂದ ಕಂಗೊಳಿಸಲಿವೆ. ಭಾಗಮಂಡಲ ಭಗಂಡೇಶ್ವರ ಸನ್ನಿದಿಯಲ್ಲಿ ಜರುಗುವ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರಂಭಕ್ಕೆ ವೇದಿಕೆ ಸಿದ್ದಗೊಂಡಿದ್ದು, ಸುಮಾರು ಸಾವಿರ ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಭಾಗಮಂಡಲಕ್ಕೆ ಆಗಮಿಸುವ ಭಕ್ತಾದಿಗಳಿಗೆ ಉಪಹಾರ, ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಸುಮಾರು 30ರಿಂದ 35 ಸಾವಿರ ಮಂದಿಗೆ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಆಹಾರ ಧಾನ್ಯ, ತರಕಾರಿ ಇತರ ಪದಾರ್ಥಗಳನ್ನು ಸಂಗ್ರಹಿಸಲಾಗಿದೆ ಎಂದು ಕಾರ್ಯಾಧ್ಯಕ್ಷರು ತಿಳಿಸಿದ್ದಾರೆ.
ಯಕ್ಷಗಾನ, ಪೌರಾಣಿಕ ನಾಟಕ, ಭಕ್ತಿ ಸಂಗೀತ, ಹರಿಕಥೆ, ಭರತನಾಟ್ಯ, ನೃತ್ಯ ರೂಪಕ, ಹಾಡುಗಾರಿಕೆ, ಕೊಳಲು ವಾದನ, ಭಕ್ತಿಗೀತೆ, ಸುಗಮ ಸಂಗೀತ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ದಿನಗಳಂದು ನಡೆಯಲಿವೆ ಎಂದು ಮಾತಂಡ ಮೊಣ್ಣಪ್ಪ ಅವರು ವಿವರಿಸಿದರು. ಪುನರ್ ಪ್ರತಿಷ್ಠಾಪನಾ ಸಮಿತಿಯ ಖಜಾಂಚಿಯಾದ ಎಂ.ಎಂ.ಸುರೇಶ್ ಚಂಗಪ್ಪ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿ 10.00 ಗಂಟೆಯೊಳಗೆ ಮುಕ್ತಾಯ ಮಾಡಲು ನಿರ್ಧರಿಸಲಾಗಿದೆ ಎಂದರು.
ಭಗಂಡೇಶ್ವರ ದೇವಾಲಯದ ಭಕ್ತಾದಿಗಳ ಸಹಕಾರದಿಂದ ಪುನರ್ ಪ್ರತಿಷ್ಠಾಪನಾ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ ಎಂದು ಅವರು ತಿಳಿಸಿದರು. ಭಾಗಮಂಡಲ ದೇವಸ್ಥಾನದ ಸಮಿತಿಯ ವ್ಯವಸ್ಥಾಪಕರಾದ ಸಂಪತ್ ಕುಮಾರ್, ಊಟದ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಬಿ.ಎಸ್.ತಮ್ಮಯ್ಯ ಮಾತನಾಡಿದರು, ತಲಕಾವೇರಿ ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಟಿ.ಎಸ್.ನಾರಾಯಣಾಚಾರ್ ಪ್ರಸಾದ ಸಮಿತಿಯ ರವೀಂದ್ರ ಹೆಬ್ಬಾರ್, ಅಲಂಕಾರ ಸಮಿತಿಯ ಅಧ್ಯಕ್ಷರಾದ ರಾಜು, ಪ್ರಚಾರ ಸಮಿತಿಯ ಹೆಚ್.ಎಸ್. ಮಂಜುನಾಥ್, ಸ್ವಾಗತ ಸಮಿತಿಯ ಅಧ್ಯಕ್ಷರಾದ ಭರತ್, ಭಾಗಮಂಡಲ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ಮೀನಾಕ್ಷಿ ಮೊದಲಾದವರು ವೀಕ್ಷಣೆ ಸಂದರ್ಭದಲ್ಲಿ ಇದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications