ಈಗ ನಾಲ್ಕನೇ ರಂಗದ ಆಸ್ತಿತ್ವಕ್ಕೆ ಚಿಂತನೆ
ನವದೆಹಲಿ ಮಾ 23: ಚುನಾವಣಾ ಸಮಯದಲ್ಲಿ ಒಗ್ಗಟ್ಟಾಗುವ ಪ್ರಾದೇಶಿಕ ಪಕ್ಷಗಳು ದೇಶದ ರಾಜಕೀಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾ ಬಂದಿದೆ. ಇತ್ತೀಚೆಗಸ್ಟೇ ಎಡಪಕ್ಷಗಳು, ಜನತಾದಳ, ತೆಲುಗುದೇಶಂ, ಬಿಎಸ್ಪಿ , ಎಐಡಿಎಂಕೆ ಮುಂತಾದ ಪಕ್ಷಗಳು ಒಗ್ಗಟ್ಟಾಗಿ ತೃತೀಯರಂಗಕ್ಕೆ ಚಾಲನೆ ನೀಡಿದೆ. ಇದರ ಬೆನ್ನಲ್ಲೇ ಸದ್ದಿಲ್ಲದೆ ನಾಲ್ಕನೇ ರಂಗವೊಂದು ರಚನೆಗೊಳ್ಳುವ ಸೂಚನೆ ಕಂಡುಬಂದಿದೆ.
ಚುನಾವಣೆಗೆ ಮುಂಚೆ ಒಂದರ ಮೇಲೊಂದರಂತೆ ಏಟು ತಿನ್ನುತ್ತಿರುವ ಕಾಂಗ್ರೆಸ್ ಗೆ ಈ ಸುದ್ದಿ ಬಿಸಿ ಮುಟ್ಟಿಸುವುದಂತೂ ನಿಜ. ಅಧಿಕಾರದ ಈ ಏಣಿಯಾಟದಲ್ಲಿ ಚದುರಿದ್ದ ನಾಯಕರೆಲ್ಲಾ 'ರಾಮ್ ಮನೋಹರ್ ಲೋಹಿಯಾ' ಹೆಸರಲ್ಲಿ ಮತ್ತೆ ಒಂದಾಗುವ ಲಕ್ಷಣಗಳು ಕಾಣಿಸುತ್ತಿವೆ. ತೃತೀಯರಂಗ ಸರಿಯಾಗಿ ಗರಿಗೆದರುವ ಮುಂಚೆಯೇ ನಾಲ್ಕನೇ ರಂಗ ಬೇರುಬಿಡಲು ಆರಂಭಿಸಿದೆ. ಈ ರಂಗದಲ್ಲಿ ಸಮಾಜವಾದಿ ಪಕ್ಷದ ಮುಲಾಯಮ್ ಸಿಂಗ್ ಯಾದವ್, ರಾಷ್ಟ್ರೀಯ ಜನತಾದಳದ ಲಾಲು ಪ್ರಸಾದ್ ಯಾದವ್, ಜೆಡಿಯುನ ನಿತೀಶ್ ಕುಮಾರ್, ಎಲ್ಜೆಪಿಯ ರಾಮ್ ವಿಲಾಸ್ ಪಾಸ್ವಾನ್, ಬಿಜೆಡಿಯ ನವೀನ್ ಪಟ್ನಾಯಕ್ ಮುಂತಾದವರ ಹೆಸರು ಕೇಳಿಬರುತ್ತಿದೆ.
ಸಂಸತ್ತಿನಲ್ಲಿ ಮತಕ್ಕಾಗಿ ಲಂಚ ಪ್ರಕರಣದಲ್ಲಿ ಅಮರ್ ಸಿಂಗ್ ಹೆಸರು ಕೇಳಿಬಂದಾಗ ಅವರ ನೆರವಿಗೆ ಲಾಲೂ, ಪಾಸ್ವಾನ್ ಬಂದಿದ್ದರು. ಈಗ ಈ ಮೂವರೂ ನಾಯಕರುಗಳು ತಮ್ಮತಮ್ಮ ರಾಜ್ಯದಲ್ಲಿ ಕಾಂಗ್ರೆಸ್ ನೊಂದಿಗೆ ಸೀಟ್ ಹೊಂದಾಣಿಕೆ ವಿಷಯದಲ್ಲಿ ಮುನಿಸಿಕೊಂಡಿದ್ದಾರೆ. ಇತ್ತ ನಿತೀಶ್ ಕುಮಾರ್ ಮತ್ತು ನವೀನ್ ಪಟ್ನಾಯಕ್ ಎನ್ ಡಿ ಎದಿಂದ ದೂರ ಸರಿಯುವ ಉತ್ಸಾಹದಲ್ಲಿದ್ದಾರೆ. ಹೀಗಾಗಿ ನಾಲ್ಕನೇ ರಂಗದ ಮೂಲಕ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಈ ನಾಯಕರು ಚಿಂತನೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications