ಶ್ರೀರಾಮಸೇನೆಗೆ ಗೋವಾ ಸರ್ಕಾರ ನಿಷೇಧ
ಪಣಜಿ, ಮಾ. 22 : ಮಂಗಳೂರು ಪಬ್ ದಾಳಿ, ಪ್ರೇಮಿಗಳ ದಿನಾಚರಣೆ ವಿರೋಧಿಸಿ ದೇಶಾದ್ಯಂತ ಕುಖ್ಯಾತಿ ಪಡೆದಿದ್ದ ಶ್ರೀರಾಮಸೇನೆ ಸಂಘಟನೆಗೆ ಗೋವಾ ಸರ್ಕಾರ ನಿಷೇಧ ಹೇರಿದೆ. ರಾಜ್ಯದಲ್ಲಿ ಶ್ರೀರಾಮಸೇನೆ ಸ್ಥಾಪಿಸುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಗೋವಾದ ಸರ್ಕಾರದ ಗೃಹ ಸಚಿವ ರವಿನಾಯಕ್, ರಾಜ್ಯದಲ್ಲಿ ಶಾಂತಿಗೆ ಧಕ್ಕೆ ತರವಂತಹ ಯಾವುದೇ ಸಂಘಟನೆ ಬೇರೂರಲು ನಾವು ಅವಕಾಶ ಮಾಡಿಕೊಡುವುದಿಲ್ಲ. ಹೀಗಾಗಿ ಸಂಘಟನೆಯ ಮೇಲೆ ನಿಷೇಧ ಹೇರಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಶ್ರೀರಾಮಸೇನೆ ಸಂಘಟನೆ ಸ್ಥಾಪಿಸುವ ಯತ್ನ ಕಾನೂನುಬಾಹಿರ ಎಂದಿರುವ ರವಿನಾಯಕ್, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು ಪಬ್ ದಾಳಿ ನಂತರ ಗೋವಾದ ಕಡೆಗೆ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕಣ್ಣು ಹಾಯಿಸಿದ್ದರು. ಗೋವಾ ಪಬ್ ಸಂಸ್ಕೃತಿಯ ಪ್ರಮುಖ ನೆಲೆಯಾಗಿದೆ. ಇದನ್ನು ವಿರೋಧಿಸುವ ಸಲುವಾಗಿ ಸಂಘಟನೆ ಸ್ಥಾಪಿಸುವುದಾಗಿ ಮುತಾಲಿಕ್ ಹೇಳಿದ್ದರು. ಇದನ್ನು ಗೋವಾ ಸರ್ಕಾರ ಹಾಗೂ ಬಿಜೆಪಿ ನಾಯಕ ಮನೋಹರ್ ಪರಿಕ್ಕರ್ ತೀವ್ರವಾಗಿ ವಿರೋಧಿಸಿದ್ದರು. ಗೋವಾದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications