ಸಂಸದ ಅಂಗಡಿ ಜನ್ಮ ಜಾಲಾಡುತ್ತಿರುವ ಕರವೇ
ಬೆಳಗಾವಿ/ ಬೆಂಗಳೂರು, ಮಾ. 17 : ಮರಾಠಿ ಧ್ವಜ ಹಿಡಿದ ಬೆಳಗಾವಿ ಸಂಸದ ಸುರೇಶ ಅಂಗಡಿ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಟೀಕೆ, ಆಕ್ರೋಶ ಮತ್ತು ಪ್ರತಿಭಟನೆಗಳು ಆರಂಭವಾಗಿವೆ. ಮರಾಠಿಗರ ಬೆಂಬಲಕ್ಕೆ ನಿಂತಿರುವ ಸಂಸದ ಅಂಗಡಿ ಹಾಗೂ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ ಪಾಟೀಲ್ ಅವರಿಗೆ ಬಿಜೆಪಿಯಿಂದ ಉಚ್ಚಾಟಿಸಬೇಕು ಎಂದು ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಎರಡು ಬಣಗಳು ಪ್ರತಿಭಟನೆ ಆರಂಭಿಸಿವೆ.
ಕರವೇ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಬೆಳಗಾವಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರೆ, ನಾರಾಯಣಗೌಡ ಬಣದ ಕಾರ್ಯಕರ್ತರು ಶಾಸಕ ಸಂಜಯ್ ಪಾಟೀಲ್ ಅವರ ಕಚೇರಿ ನುಗ್ಗಿ ಪೀಠೋಪಕರಣ ಧ್ವಂಸಗೊಳಿಸದರಲ್ಲದೆ ಅವರ ವಿರುದ್ಧ ಘೋಷಣೆ ಕೂಗಿದರು. ಸಂಸದ ಸುರೇಶ ಅಂಗಡಿ ಹಾಗೂ ಸಂಜಯ ಪಾಟೀಲ್ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಅವರು, ಇದೊಂದು ನಾಡು ದ್ರೋಹ ಕೆಲಸ ಎಂದು ಸಂಸದ ಹಾಗೂ ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಇಬ್ಬರನ್ನು ಬಿಜೆಪಿ ನಾಯಕರು ಪಕ್ಷದಿಂದ ಉಚ್ಚಾಟಿಸಬೇಕು. ಇಲ್ಲದಿದ್ದರೆ ನಾಳೆಯಿಂದಲೇ ಅವರ ವಿರುದ್ಧ ಮತ್ತು ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಜನಾಂದೋಲನ ಆರಂಭಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಸೋಮವಾರ ಕರವೇ ಕಾರ್ಯಕರ್ತರು ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಕನ್ನಡ ಧ್ವಜ ಹಾರಿಸಲು ಮುಂದಾದಾಗ ಸಂಸದ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಅದನ್ನು ವಿರೋಧಿಸಿ ಎಂಇಎಸ್ ಪರ ನಿಂತಿದ್ದರು.
(ದಟ್ಸ್
ಕನ್ನಡ
ವಾರ್ತೆ)
ಕನ್ನಡ
ವಿರೋಧಿ
ಸಂಸದ
ಸುರೇಶ
ಅಂಗಡಿ