ನನಗೆ ಜೀವಭಯವಿದೆ, ನವಾಜ್ ಷರೀಫ್
ಇಸ್ಲಾಮಾಬಾದ್, ಮಾ.12 : ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನೆಗೆ ಇಳಿದಿರುವ ನನಗೆ ಜೀವಭಯವಿದೆ. ನನ್ನನ್ನು ಕೊಲ್ಲಲು ಪಾಕಿಸ್ತಾನದ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಸುಪಾರಿ ನೀಡಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಹಾಗೂ ಪಿಎಂಎಲ್ (ಎನ್) ಮುಖಂಡ ನವಾಜ್ ಷರೀಫ್ ಗಂಭೀರ ಆರೋಪ ಮಾಡಿದ್ದಾರೆ.
ಬ್ರಿಟನ್ ಪತ್ರಿಕೆ ಗಾರ್ಡಿಯನ್ ಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ. ಜರ್ದಾರಿ ಸೂಚನೆ ಮೇರೆಗೆ ಕೆಲ ಅಧಿಕಾರಿಗಳು ನನ್ನನ್ನು ಮುಗಿಸಲು ಸಂಚು ರೂಪಿಸಿದ್ದಾರೆ ಎಂದರು. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣ ನಾಶವಾಗಿದೆ. ದೇಶದಲ್ಲಿ ಅಶಾಂತಿ ಮನೆ ಮಾಡಿದೆ. ದೇಶದಲ್ಲಿ ಯಾವಾಗ ಬೇಕಾದರೂ ಅಲ್ಲೋಕಲ್ಲೋಲ ಸ್ಥಿತಿ ನಿರ್ಮಾಣವಾಗಬಹುದು ಎಂದು ಷರೀಫ್ ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಸರ್ವಾಧಿಕಾರಿ ನೀತಿಯಿಂದ ಪಾಕಿಸ್ತಾನ ಈ ಮಟ್ಟಕ್ಕೆ ಇಳಿದಿದೆ. ಆಡಳಿತ ನಡೆಸುವಲ್ಲಿ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ. ಆದ್ದರಿಂದ ಸರ್ಕಾರವನ್ನು ಶೀಘ್ರದಲ್ಲಿ ಕಿತ್ತೊಗೆಯಬೇಕು ಎಂದು ಆವರು ಆಗ್ರಹಿಸಿದರು. ಬುಧವಾರ ಷರೀಫ್ ಇಸ್ಲಾಮಾಬಾದ್ ನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರು ಪಾಕ್ ಸರ್ಕಾರದ ಜನ್ಮ ಜಾಲಾಡಿದ್ದರು.
ಸದ್ಯ ಸೌಧಿಅರೇಬಿಯಾಕ್ಕೆ ತೆರಳಿರುವ ಜರ್ದಾರಿ ಅವರು ಪಾಕಿಸ್ತಾನಕ್ಕೆ ಮರಳುವುದು ಬೇಡ ಎಂದು ಷರೀಫ್ ಹೇಳಿದ್ದರು. ಸೇನಾ ಮುಖ್ಯಸ್ಥ ಅಶ್ಫಕ್ ಕಿಯಾನಿ ಕೂಡ ಅಧ್ಯಕ್ಷ ಜರ್ದಾರಿ ಭೇಟಿ ಮಾತುಕತೆ ನಡೆಸಿದ್ದರು. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಪಾಕಿಸ್ತಾನದಲ್ಲಿ ಕ್ಷಿಪ್ರಕ್ರಾಂತಿ ಮೂಲಕ ಮತ್ತೆ ಸೇನಾಡಳಿತ ಜಾರಿಯಾಗುವ ಸಾಧ್ಯತೆಗಳಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications