ಜವಳಿ ಉತ್ಪನ್ನಗಳನ್ನು ಗ್ರಾಹಕರಿಂದ ಖರೀದಿಸಬೇಕು
ರಾಮನಗರ, ಮಾ. 8 : ಕೈಮಗ್ಗದ ನೇಕಾರರು ಉತ್ಪಾದಿಸಿದ ಉತ್ಪನ್ನಗಳನ್ನು ಗ್ರಾಹಕರು ನೇರವಾಗಿ ಖರೀದಿಸುವುದರಿಂದ ಮದ್ಯವರ್ತಿಗಳ ಹಾವಳಿ ತಪ್ಪಿಸಿ, ನೇಕಾರರಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಿದಂತಾಗುತ್ತದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕರಾದ ಎ. ಆನಂದ ಅವರು ತಿಳಿಸಿದರು.
ಅವರು ಶುಕ್ರವಾರ ಜವಳಿ ಅಭಿವೃದ್ಧಿ ಆಯುಕ್ತರು, ಕೈಮಗ್ಗ ಮತ್ತು ಜವಳಿ ಇಲಾಖೆ, ಬೆಂಗಳೂರು ಹಾಗೂ ಜವಳಿ ಮಂತ್ರಾಲಯ ನವದೆಹಲಿ ಇವರು ರಾಮನಗರದ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಸಾಂಸ್ಕೃತಿಕ ಭವನದ ಆವರಣದಲ್ಲಿ ಮಾರ್ಚ್ 6 ರಿಂದ 12ರವರೆಗೆ 7 ದಿನಗಳ ಕಾಲ ಆಯೋಜಿಸಿರುವ "ಬಣ್ಣದ ಸಿರಿ-2009" ಜಿಲ್ಲಾ ಮಟ್ಟದ ಕೈಮಗ್ಗ ವಸ್ತು ಪ್ರದರ್ಶನ ಹಾಗೂ ಉತ್ಪನ್ನಗಳ ಮಾರಾಟ ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ನೇಕಾರರು ಕಷ್ಟಕಾರ್ಪಣ್ಯಗಳಿಂದ ವಿವಿಧ ವಿನ್ಯಾಸದ ವೈವಿದ್ಯಮಯ ಬಟ್ಟೆಗಳನ್ನು ತಮ್ಮ ಕೌಶಲ್ಯದಿಂದ ತಯಾರಿಸುತ್ತಾರೆ. ಇವರ ಪರಿಶ್ರಮಕ್ಕೆ ವಂಚನೆಯಾಗದಂತೆ ತಕ್ಕ ಪ್ರತಿಫಲ ದೊರೆಯುವಂತಾಗಬೇಕು. ಗ್ರಾಹಕರು ಬೇರೆಡೆ ರೇಷ್ಮೆ ಬಟ್ಟೆಗಳನ್ನು ಖರೀದಿಸಿ ವಂಚನೆಗೊಳಗಾಗದೆ, ನೇಕಾರರು ತಯಾರಿಸಿದ ಬಟ್ಟೆಗಳ ಉತ್ಪನ್ನಗಳನ್ನು ನೇರವಾಗಿ ಖರೀದಿಸುವುದರಿಂದ ನೇಕಾರರಿಗೆ ಅಧಿಕಲಾಭ ದೊರೆಯುತ್ತದೆ ಎಂದ ಜಂಟಿ ನಿರ್ದೇಶಕರು, ವಸ್ತುಪ್ರದರ್ಶನ ಮಾರಾಟ ಮೇಳಗಳಲ್ಲಿ ಒಂದೇ ಸೂರಿನಡಿ ವಿವಿಧ ವಿನ್ಯಾಸಗಳ ಕೈಮಗ್ಗಗಳ ಬಟ್ಟೆಗಳನ್ನು ನೇಕಾರರು ಪರಿಚಯಿಸಬಹುದು ಎಂದರು.
ಈ ಮಾರಾಟಮೇಳಕ್ಕೆ 10 ಜಿಲ್ಲೆಗಳಿಂದ ಆಗಮಿಸಿರುವ ನೇಕಾರರ ಸಂಘ ಸಂಸ್ಥೆಗಳು, 19 ಮಾರಾಟ ಮಳಿಗೆಗಳನ್ನು ತೆರೆದಿದ್ದಾರೆ. ಇವರು ರಚಿಸಿರುವ ವಿವಿಧ ವೈವಿದ್ಯಮಯ ವಿನ್ಯಾಸದ ರೇಷ್ಮೆ ಸೀರೆಗಳು ಮನ ಮೆಚ್ಚುವಂತಿದ್ದು, ಜಿಲ್ಲೆಯ ಗ್ರಾಹಕರು ಇದನ್ನು ವೀಕ್ಷಿಸಿ ಖರೀದಿಸಬಹುದಾಗಿದೆ ಎಂದರಲ್ಲದೆ, ಜಂಟಿ ನಿರ್ದೇಶಕರು ಮಾರಾಟದ ಮಳಿಗೆಗಳಲ್ಲಿನ ವಿವಿಧ ವಿನ್ಯಾಸದ ಜವಳಿ ಉತ್ಪನ್ನಗಳನ್ನು ವೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರಲ್ಲದೆ, ಬಟ್ಟೆಗಳ ಬೆಲೆ ಮತ್ತು ಗುಣಮಟ್ಟಗಳನ್ನು ಈ ಸಂದರ್ಭದಲ್ಲಿ ಪರಿಶೀಲಿಸಿದರು.
ಉಪನಿರ್ದೇಶಕರಾದ ಯೋಗೀಶ್ ಮಾತನಾಡಿ, ನೇಕಾರರಿಗೆ ಅನುಕೂಲವಾಗುವಂತೆ 1 ಸಾವಿರ ನೇಕಾರರ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಇಲಾಖೆ ಆಯೋಜಿಸುವ ಇಂತಹ ಮಾರಾಟ ಮೇಳಗಳಲ್ಲಿ ನೇಕಾರರು ಭಾಗವಹಿಸಿ ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸಬೇಕೆಂದರು.
ಜಿಲ್ಲಾ ಪಂಚಾಯತ್ನ ಮುಖ್ಯ ಯೋಜನಾಧಿಕಾರಿ ಡಿ. ಜಯರಾಮ್ ಅವರು ಮಾತನಾಡಿ, ನೇಕಾರರು ಉತ್ಪಾದಿಸಿರುವ ಉತ್ಪನ್ನಗಳನ್ನು ಗ್ರಾಹಕರು ಖರೀದಿಸುವುದರಿಂದ ಅವರಲ್ಲಿ ಅಡಗಿರುವ ಸುಪ್ತಚೇತನ ಹೊರಬಂದು ಉತ್ತೇಜನ ನೀಡಿದಂತಾಗುತ್ತದೆ ಎಂದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications