ಜಾಫರ್ ಷರೀಫ್ ವಿರುದ್ದ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಇಲ್ಲ
ಬೆಂಗಳೂರು, ಮಾ. 5 : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಿ ಕೆ ಜಾಫರ್ ಷರೀಫ್ ಅವರನ್ನು ಕಣಕ್ಕಿಳಿಸಿದರೆ ಜನತಾದಳ (ಎಸ್) ಈ ಕ್ಷೇತ್ರದಲ್ಲಿ ತನ್ನ ಉಮೇದುವಾರರನ್ನು ನಿಲ್ಲಿಸುವುದಿಲ್ಲ ಎಂದು ಜನತಾದಳ ವರಿಷ್ಠ ಎಚ್ ಡಿ ದೇವೇಗೌಡ ಘೋಷಿಸಿದ್ದಾರೆ.
ಒಂದು ಕಾಲದ ದೇವೇಗೌಡರ ಆಪ್ತರಾಗಿದ್ದು, ಇದೀಗ ಬದ್ದ ವಿರೋಧಿಯಾಗಿರುವ ಸಿ ಎಂ ಇಬ್ರಾಹಿಮ್ ಬೆಂಗಳೂರು ಕೇಂದ್ರದ ಕಾಂಗ್ರೆಸ್ಸಿನ ಇನ್ನೊಬ್ಬ ಅಭ್ಯರ್ಥಿಯಾಗಿದ್ದಾರೆ. ಇಬ್ರಾಹಿಂ ಅವರಿಗೆ ಟಿಕೆಟ್ ತಪ್ಪಿಸಲು ಗೌಡರು ಈ ತಂತ್ರ ರೂಪಿಸಿದ್ದಾರೆ. ಈ ಮೂಲಕ ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯುವ ತಮ್ಮ ಎಂದಿನ ರಾಜಕೀಯ ಚತುರತೆಯನ್ನು ದೇವೇಗೌಡರು ಪ್ರದರ್ಶಿಸಿದ್ದಾರೆ.
ಚಾಮರಾಜಪೇಟೆ ಶಾಸಕರಾಗಿರುವ ಜಮೀರ್ ಅಹ್ಮೆದ್ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲು ಗೌಡರು ಬಯಸಿದ್ದರು. ಆದರೆ ಜಾಫರ್ ಷರೀಫ್ ಸ್ಪರ್ಧಿಸಿದರೆ ತಾನು ಸ್ಪರ್ಧಿಸುವುದಿಲ್ಲ ಎಂದು ಜಮೀರ್ ತನ್ನ ಇಂಗಿತ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ, ದೇವೇಗೌಡ ಅವರನ್ನು ಬುಧವಾರ ಜಾಫರ್ ಷರೀಫ್ ಭೇಟಿಯಾಗುವ ತನಕ ತನ್ನ ಉಮೇದುವಾರಿಕೆಯನ್ನು ಸಲ್ಲಿಸಿರಲಿಲ್ಲ ಎಂದು ತಿಳಿದುಬಂದಿದೆ.
ದೇವೇಗೌಡ ಪ್ರಧಾನಿಯಾಗಿದ್ದಾಗ ಇಬ್ರಾಹಿಂ ಕೇಂದ್ರದ ಕ್ಯಾಬಿನೆಟ್ ಸಚಿವರಾಗಿದ್ದರು. ಆನಂತರ ಸಿದ್ದರಾಮಯ್ಯ ಜನತಾದಳ ತೊರೆದಾಗ ಇವರು ಕೂಡ ಪಕ್ಷದ ವರಿಷ್ಠರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಜನತಾದಳ ತೊರೆದು ಕಾಂಗ್ರೆಸ್ ಸೇರಿದ್ದರು.
(ದಟ್ಸ್ ಕನ್ನಡ ವಾರ್ತೆ)
ನವದೆಹಲಿಯಲ್ಲಿ ದೇವೇಗೌಡ-ಷರೀಫ್ ಭೇಟಿ











Click it and Unblock the Notifications