ಫೆಬ್ರವರಿ 28 ರಂದು ಟಿ.ಎಸ್.ಆರ್ ಪ್ರಶಸ್ತಿ ಪ್ರದಾನ
ಬೆಂಗಳೂರು, ಫೆ. 26 : ಕನ್ನಡ ಪತ್ರಿಕೋದ್ಯಮ ಕ್ಷೇತ್ರದ ಅತಿ ಎತ್ತರದ ವ್ಯಕ್ತಿತ್ವವಾದ ದಿ. ಟಿ.ಎಸ್. ರಾಮಚಂದ್ರ ರಾವ್ ಅವರ ಹೆಸರಿನಲ್ಲಿ ಸರ್ಕಾರವು ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಪತ್ರಕರ್ತರಿಗೆ ಟಿ.ಎಸ್.ಆರ್. ಪತ್ರಿಕೋದ್ಯಮ ಪ್ರಶಸ್ತಿ ಯನ್ನು 2003 ರಿಂದ ನೀಡುತ್ತಾ ಬಂದಿದೆ. ಹಾಗೆಯೇ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿಗಳನ್ನು ಸಹಾ ಪ್ರದಾನ ಮಾಡಲಾಗುತ್ತಿದೆ.
2006ನೇ ವರ್ಷದ ಟಿಯೆಸ್ಸಾರ್ ಪತ್ರಿಕೋದ್ಯಮ ಪ್ರಶಸ್ತಿ, ಅಭಿವೃದ್ಧಿ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಕಾರ್ಯಕ್ರಮವನ್ನು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಯವನಿಕ ಸಭಾಂಗಣದಲ್ಲಿ ಫೆಬ್ರವರಿ 28 ರಂದು ಸಂಜೆ 4 ಗಂಟೆಗೆ ವಾರ್ತಾ ಇಲಾಖೆಯಿಂದ ಏರ್ಪಡಿಸಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
2006ನೇ ಸಾಲಿನ ಟಿ.ಎಸ್.ಆರ್. ಪ್ರಶಸ್ತಿಗೆ ರಾಜಾ ಶೈಲೇಶಚಂದ್ರ ಗುಪ್ತ, ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಶಿವರಾಮ ಅಸುಂಡಿ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಶಿವಾನಂದ ಕಳವೆ ಹಾಗೂ ಸುಮಂಗಲಾ ಎಸ್. ಮುಮ್ಮಿಗಟ್ಟಿ ಅವರುಗಳು ಭಾಜನರಾಗಿದ್ದಾರೆ.
ಅಬಕಾರಿ, ವಾರ್ತಾ, ಐ.ಟಿ.ಬಿ.ಟಿ ಹಾಗೂ ಬೆಂಗಳೂರು ಜಲಮಂಡಳಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭದಲ್ಲಿ ಸಾರಿಗೆ ಸಚಿವ ಆರ್. ಅಶೋಕ್, ವಿಧಾನಸಭಾ ಸದಸ್ಯ ಆರ್. ರೋಶನ್ ಬೇಗ್, ನಿವೃತ್ತ ನ್ಯಾಯಮೂರ್ತಿ ಹಾಗೂ ಟಿಯೆಸ್ಸಾರ್ ಪತ್ರಿಕೋದ್ಯಮ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಪಿ. ವಿಶ್ವನಾಥ ಶೆಟ್ಟಿ, ಕೃಷಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಹಾಗೂ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ ಜಿ.ಕೆ. ವೀರೇಶ್ ಅವರು ಪಾಲ್ಗೊಳ್ಳಲಿದ್ದು, ವಿಶೇಷ ಆಹ್ವಾನಿತರಾಗಿ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಆರ್.ಪಿ. ಜಗದೀಶ್ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಡಿ.ಪಿ. ಪರಮೇಶ್ವರ ಅವರು ಪಾಲ್ಗೊಳ್ಳಲಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
23
ಕಾರ್ಯನಿತರ
ಪತ್ರಕರ್ತರಿಗೆ
ಪ್ರಶಸ್ತಿ
ಪುರಸ್ಕಾರ