ದತ್ತ ಪೀಠ ನಿರ್ಮಾಣ ಹೇಳಿಕೆಗೆ ಸಿಎಂ ಆಕ್ರೋಶ
ಚಿಕ್ಕಮಗಳೂರು, ಫೆ. 22 : ದತ್ತ ಪೀಠ ಕುರಿತಂತೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿರುವ ಮುತಾಲಿಕ್, ಸರ್ಕಾರ ಶೀಘ್ರದಲ್ಲಿ ದತ್ತ ಪೀಠದ ಬಳಿ ದತ್ತ ಮಂದಿರ ನಿರ್ಮಾಣ ಮಾಡದಿದ್ದಲ್ಲಿ ನಾಡಿನ ಲಕ್ಷಾಂತರ ಕರಸೇವಕರ ಮೂಲಕ ಶ್ರೀರಾಮಸೇನೆ ದತ್ತ ದತ್ತ ಮಂದಿರ ನಿರ್ಮಾಣ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹೇಳಿಕೆಗೆ ತೀವ್ರ ಆಕ್ಷೇಪ ಮತ್ತು ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಲಕ್ಷ್ಮಣ ರೇಖೆ ಮೀರಿ ಮುತಾಲಿಕ್ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇಂತಹ ಹೇಳಿಕೆಯಿಂದ ಜನರಲ್ಲಿ ಕೋಮು ಭಾವನೆ ಪ್ರಚೋದನೆಗೆ ಕುಮ್ಮಕ್ಕು ನೀಡಿದಂತಾಗುವುದು. ಈ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಲು ಕಾರಣವಾಗುತ್ತಿದೆ. ಕಾನೂನು ಉಲ್ಲಂಘಿಸಲು ಯತ್ನಿಸಿದರೆ, ಮುತಾಲಿಕ್ ಅವರಿಗೆ ಕಾನೂನಿನಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಯಡಿಯೂರಪ್ಪ ಚಿಕ್ಕಮಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮಾತನಾಡುತ್ತಿದ್ದರು.
ಇಂದು ಬೆಳಗ್ಗೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು, ದತ್ತ ಪೀಠ ಸಂರಕ್ಷಣೆ ಮಾಡುವ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಇದೀಗ ಅದನ್ನು ಮರೆತಿದೆ. ಅಧಿಕಾರ ಹಿಡಿಯುವ ಸಲುವಾಗಿ ಸುಳ್ಳು ಆಶ್ವಾಸನೆ ನೀಡಿ ಹಿಂದೂಗಳಿಗೆ ಮೋಸ ಎಸಗಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರೇಮಿಗಳ ದಿನ ವಿರೋಧಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡ ಮುತಾಲಿಕ್, ಕೆಲ ಮಹಿಳೆಯರು ತಮಗೆ ಪಿಂಕ್ ಚಡ್ಡಿ ಕಳುಹಿಸಿರುವುದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದರು. ಫೆ 14 ರಂದು ತಮ್ಮ ಕಚೇರಿಗೆ ಸುಮಾರು 1500 ಪಿಂಕ್ ಚಡ್ಡಿಗಳು ಬಂದಿವೆ. ಪಿಂಕ್ ಚಡ್ಡಿಗಳು ಕಳುಹಿಸಿರುವವರ ವಿರುದ್ಧ ಕಾನೂನು ಸಮರ ನಡೆಸಲು ಚಿಂತನೆ ನಡೆಸಲಾಗಿದ್ದು, ಇದಕ್ಕಾಗಿ 25 ಮಂದಿ ಮಹಿಳಾ ನ್ಯಾಯವಾದಿಗಳು ಮುಂದೆ ಬಂದಿದ್ದಾರೆ ಎಂದು ಅವರು ಹೇಳಿದರು. ರೇಣುಕಾ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿರುವುದನ್ನು ಮುತಾಲಿಕ್ ಸ್ವಾಗತಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ರೇಣುಕಾ ಚೌಧರಿ ವಿರುದ್ಧ ಎಫ್ ಐಆರ್ ದಾಖಲು












Click it and Unblock the Notifications