ಬಿಎಸ್ ವೈಕಣ್ಣುಗಳಿಗೆ ಸರ್ಜರಿ ಆಗಬೇಕಾಗಿದೆ:ಖರ್ಗೆ
ಬೆಂಗಳೂರು, ಫೆ.20: ''ನಿಮ್ಮ ಎರಡೂ ಕಣ್ಣುಗಳನ್ನು ಆದಷ್ಟು ಬೇಗ ಸರ್ಜನ್ ಬಳಿ ತೋರಿಸಿಕೊಳ್ಳಿ, ಇಲ್ಲವಾದರೆ ನಿಮಗೆ ಅಂಧತ್ವ ಬಂದೀತು, ಜೋಕೆ!'' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದಾರೆ.
ಖರ್ಗೆ ಪ್ರಕಾರ ಗೃಹ ಸಚಿವ ವಿಎಸ್ ಆಚಾರ್ಯ ಮತ್ತು ವೈದ್ಯಕೀಯ ಸಚಿವ ರಾಮಚಂದ್ರಗೌಡ ಅವರು ಮುಖ್ಯಮಂತ್ರಿಗಳ ಎರಡು ಕಣ್ಣುಗಳಿದ್ದಂತೆ. ಈ ಇಬ್ಬರೂ ಸಚಿವರ ವರ್ತನೆ ಸರಿಯಿಲ್ಲ. ಹೀಗಾಗಿ ಸರ್ಜರಿ ಮಾಡಿಕೊಳ್ಳಿ ಎಂದು ಪರೋಕ್ಷವಾಗಿ ಛೇಡಿಸಿದ್ದಾರೆ. ಈ ಇಬ್ಬರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂಬುದು ಖರ್ಗೆ ಮಾತಿನ ಒಳಾರ್ಥ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದು ಮತ್ತು ಸಚಿವ ರಾಮಚಂದ್ರ ಗೌಡ ವಿನಾ ಕಾರಣ ಕಲಾವಿದರ ಮೇಲೆ ಹರಿಹಾಯ್ದ ಘಟನೆಗಳನ್ನು ಉದ್ದೇಶಿಸಿ ಖರ್ಗೆ ಹೀಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕುರಿತು ಚರ್ಚೆಯಲ್ಲಿ ಪಾಲ್ಗೊಂಡಿದ್ದ ಖರ್ಗೆ, ಈ ಇಬ್ಬರು ಸಚಿವರು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ , ಆದರೂ ಮುಖ್ಯಮಂತ್ರಿಗಳಿಗೆ ಈ ಸಚಿವರೆಂದರೆ ಬಹಳ ಪ್ರೀತಿ. ಗೃಹ ಸಚಿವರು ಸಮಸ್ಯೆ ಹುಟ್ಟುಹಾಕಿ ಮುಖ್ಯಮಂತ್ರಿಗಳನ್ನು ತೊಂದರೆಗೆ ಸಿಲುಕಿಸುತ್ತಿದ್ದಾರೆ ಅದ್ದರಿಂದ ಈ ಎರಡೂ ಕಣ್ಣುಗಳನ್ನು ಸರ್ಜರಿ ಮಾಡಿಸುವುದು ಸೂಕ್ತ ಎಂದು ಖರ್ಗೆ ಮಾರ್ಮಿಕವಾಗಿ ನುಡಿದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ರಾಜ್ಯ ಬಜೆಟ್: ಜನಪ್ರಿಯ ಘೋಷಣೆಗಳ ನಿರೀಕ್ಷೆ












Click it and Unblock the Notifications