ಐಎಸ್ಐನಿಂದ ಆರ್ಎಸ್ಎಸ್ ಗೆ ಧನಸಹಾಯ, ಪಾಂಡೆ
ಮುಂಬೈ, ಫೆ. 19 : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ಭಾಗ್ವತ್ ಮತ್ತು ಅಲ್ಪಸಂಖ್ಯಾತರ ಘಟಕದ ನಾಯಕರುಗಳಾಗಿದ್ದ ಇಂದ್ರೇಶ್ ಮತ್ತು ಕುಮಾರ್ ಅನ್ನುವವರು ಪಾಕಿಸ್ತಾನದ ಐಎಸ್ಐನಿಂದ ಆರ್ಥಿಕ ಸಹಾಯ ಪಡೆದಿದ್ದಾರೆ ಎಂದು ಆರ್ಎಸ್ಎಸ್ ಮುಖಂಡ ಶ್ಯಾಮ್ ಆಪ್ಟೆ ತನ್ನ ಬಳಿ ಹೇಳಿದ್ದರು ಎಂದು ಮಾಲೇಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ದಯಾನಂದ ಪಾಂಡೆ ಪೊಲೀಸರಿಗೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
2008ರ ಆಗಸ್ಟ್ ತಿಂಗಳಿನಲ್ಲಿ ಆರ್ಎಸ್ಎಸ್ ಮುಖಂಡ ಶ್ಯಾಮ್ ಅಪ್ಟೆ ಅವರನ್ನು ಪುಣೆಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ, ಆರ್ಎಸ್ಎಸ್ ಅಲ್ಪಸಂಖ್ಯಾತರ ಘಟಕದ ಮುಖಂಡ ಇಂದ್ರೇಶ್, ಕುಮಾರ್ ಮತ್ತು ಭಾಗ್ವತ್ ಪಾಕಿಸ್ತಾನದ ಐಎಸ್ಐನಿಂದ ಹಣ ಪಡೆದಿರುವ ವಿಚಾರ ತಿಳಿಸಿದರು. ಇದರಿಂದ ಕೆರಳಿದ ನಾನು ಅವರೆಲ್ಲರನ್ನು ಮುಗಿಸಿಬಿಡುವಂತೆ ಕ್ಯಾಪ್ಟನ್ ಜೋಶಿ ಬಳಿ ಕೋರಿಕೊಂಡಿದ್ದು ಹೌದು ಎಂದು ಪಾಂಡೆ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ತಿಳಿಸಿದ್ದಾನೆ.
2007 ಆಗಸ್ಟ್ ರಲ್ಲಿ ನಾಸಿಕ್ ಬಳಿ ಪುರೋಹಿತ್ ಅವರನ್ನು ಭೇಟಿಯಾಗಿ 'ಅಭಿನವ ಭರತ್" ಎನ್ನುವ ಹೊಸ ಹಿಂದೂ ಸಂಘಟನೆ ಹುಟ್ಟುಹಾಕುವ ಬಗ್ಗೆ ಮಾತುಕತೆ ನಡೆಸಿದ್ದೆ ಎಂದು ಪಾ೦ಡೆ ಹೇಳಿದ್ದಾರೆ. ಜನವರಿ 2008 ರಲ್ಲಿ ಫರೀದಾಬಾದ್ ನಲ್ಲಿ ಈ ಸಂಘಟನೆಯ ಮೊದಲ ಅಧಿವೇಶನ ನಡೆಸಿದ್ದು, ಇದರಲ್ಲಿ ಪುರೋಹಿತ್, ಸುಧಾಕರ್ ಚತುರ್ವೇದಿ, ನಿವೃತ್ತ ಮಿಲಿಟರಿ ಅಧಿಕಾರಿ ಮೇಜರ್ ರಮೇಶ್ ಉಪಾಧ್ಯ ಭಾಗವಹಿಸಿದ್ದರು, ಮುಸ್ಲಿಂ ಪ್ರಾಬಲ್ಯವಿರುವ ನಗರಗಳಲ್ಲಿ ಸ್ಪೋಟ ನಡೆಸುವ ಸಂಚು ಕೂಡ ನಡೆಸಿದ್ದೆವು ಎಂದು ಪಾ೦ಡೆ ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 29 ರಂದು ಮಾಲೇಗಾಂವ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 29 ಮಂದಿ ಮೃತಪಟ್ಟು, 100ಕ್ಕೂ ಅಧಿಕ ಜನ ಗಾಯಗೊಂಡಿರುವ ಘಟನೆ ನಡೆದಿತ್ತು. ಘಟನೆಯ ಪ್ರಮುಖ ಎನ್ನಲಾದ ಸೇನಾಧಿಕಾರಿ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಹಾಗೂ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ದಯಾನಂದ್ ಪಾಂಡೆ ಸೇರಿ ಒಟ್ಟು 11 ಮಂದಿಯ ವಿರುದ್ಧ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆ ಮೋಕಾ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
(ಎಜೆನ್ಸೀಸ್)












Click it and Unblock the Notifications