ಟೆಲಿಫೋನ್ ಕದ್ದಾಲಿಕೆ ವಸುಂಧರಾ ವಿರುದ್ಧ ತನಿಖೆ
ಜೈಪುರ, ಫೆ 18: ತನ್ನ ಅಧಿಕಾರದ ಅವಧಿಯಲ್ಲಿ ಶಾಸಕರ ಮತ್ತು ತನ್ನದೇ ಸಂಪುಟ ಸಹದ್ಯೋಗಿಗಳ ದೂರವಾಣಿ ಕರೆಗಳನ್ನು ಕದ್ದಾಲಿಸುವಂತೆ ಅಂದಿನ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದ ವಸುಂಧರಾ ರಾಜೆ ತಮಗೆ ಆದೇಶ ನೀಡಿದ್ದರು ಎಂದು ಬಿಎಸ್ಏನ್ಎಲ್ ಸೇರಿದಂತೆ ದೇಶದ 7 ಪ್ರಮುಖ ದೂರವಾಣಿ ಕಂಪೆನಿಗಳು ರಾಜ್ಯ ಸರಕಾರಕ್ಕೆ ದೂರು ನೀಡಿವೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ವಿರುದ್ಧ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲಟ್ ಆದೇಶ ನೀಡಿದ್ದಾರೆ.
ಮಾಜಿ ಸಚಿವ ಕಿರೋರಿ ಲಾಲ ಮೀನಾ, ತನ್ನದೇ ಪಕ್ಷದ ಶಾಸಕ ಸುರೇಂಧರ್ ಸಿಂಗ್ ರಾಥೋರ್ , ಗುಜ್ಜಾರ್ ಪಂಗಡದ ನಾಯಕ ಮತ್ತು ಶಾಸಕ ಪ್ರಹ್ಲಾದ್ ಸಿಂಗ್ ಮತ್ತು ಅತ್ತಾರ್ ಸಿಂಗ್ ಪ್ರಮುಖವಾಗಿ ಇವರುಗಳ ಟೆಲಿಫೋನ್ ಕದ್ದಾಲಿಕೆಯಾಗಿದೆ ಎಂದು ದೂರವಾಣಿ ಸಂಸ್ಥೆಗಳು ಸರಕಾರಕ್ಕೆ ಪತ್ರ ಬರೆದಿವೆ. ಭಾರತೀಯ ದೂರವಾಣಿ ಕಾಯ್ದೆಯನ್ವಯ ವಿಶೇಷ ಸಂದರ್ಭದಲ್ಲಿ ಮಾತ್ರ ಮತ್ತು ಗೃಹ ಕಾರ್ಯದರ್ಶಿಯ ಲಿಖಿತ ಪತ್ರವಿದ್ದರೆ ದೂರವಾಣಿ ಕರೆಯನ್ನು ಕದ್ದಾಲಿಸಬಹುದಾಗಿದೆ. ಆದರೆ ರಾಜೆ, ಈ ನಿಯಮವನ್ನು ಕೂಡ ಗಾಳಿಗೆ ತೂರಿದ್ದಾರೆ ಎಂದು ಸರಕಾರ ಆಪಾದಿಸಿದೆ.
ಗೃಹ ಕಾರ್ಯದರ್ಶಿಗಳ ಅನುಪಸ್ಥಿತಿಯಲ್ಲಿ ಐಜಿ ಶ್ರೇಣಿಯ ಅಧಿಕಾರಿ ಮಧ್ಯಂತರ ಅನುಮತಿ ಆದೇಶವನ್ನು ನೀಡಬಹುದಾಗಿದೆ. ಆದರೆ, ಇದಕ್ಕೆ ಮೂರು ದಿನಗಳಲ್ಲಿ ಗೃಹ ಕಾರ್ಯದರ್ಶಿಯ ಅನುಮೋದನೆಯ ಅಗತ್ಯವಿರುತ್ತದೆ. ಆದರೆ ರಾಜಸ್ಥಾನದಲ್ಲಿ ಡಿಐಜಿ ಅವರಿಂದ ಮೌಖಿಕ ಒಪ್ಪಿಗೆ ಮಾತ್ರ ಪಡೆದು ಫೋನ್ ಕದ್ದಾಲಿಕೆ ಮಾಡಲಾಗಿತ್ತು.
(ಏಜೆನ್ಸೀಸ್)












Click it and Unblock the Notifications