ದೇಶ ಕಟ್ಟಲು ಯುವಶಕ್ತಿ ಬಳಕೆ, ಯಡಿಯೂರಪ್ಪ
ಶಿವಮೊಗ್ಗ, ಫೆ. 17 : ಸ್ವಾತಂತ್ರ್ಯ ನಂತರ ದೇಶ ಕಟ್ಟಲು ಅಗತ್ಯವಾಗಿದ್ದ ನಮ್ಮ ಯುವಶಕ್ತಿಯ ಸದ್ಭಳಕೆಯನ್ನು ಮಾಡುವ ಬಗ್ಗೆ ಯಾರೂ ಚಿಂತಿಸಲೇ ಇಲ್ಲ. 21ನೇ ಶತಮಾನ ನಮ್ಮದಾಗಬೇಕು. ಇದಕ್ಕಾಗಿ ನಮ್ಮ ಯುವಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಕರ್ನಾಟಕ ಈ ಯತ್ನದಲ್ಲಿ ದೇಶಕ್ಕೆ ಮಾದರಿಯಾಗಬೇಕು ಎಂದು ಮುಖ್ಯಮಂತ್ರಿ ಡಾ ಬಿಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಭಯೋತ್ಪಾದನಾ ವಿರೋಧಿ ವಿದ್ಯಾರ್ಥಿ ಜಾಗೃತಿ ಅಭಿಯಾನದ ಸಂಕಲ್ಪ ಸಮಾವೇಶವನ್ನು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಮುಂದಿನ ದಿನಗಳಲ್ಲಿ ಉದ್ಯೋಗ, ಊಟಕ್ಕಾಗಿ ಯುವಜನಾಂಗ ಪರಿತಪಿಸದಂತಹ ವ್ಯವಸ್ಥೆ ನಿರ್ಮಾಣವಾಗಬೇಕು ಎಂದರು. ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ವಲಸೆ ಬರುತ್ತಿರುವುದು ಪ್ರಸಕ್ತ ಸನ್ನಿವೇಶದ ಬಹುಮುಖ್ಯ ಸಮಸ್ಯೆಯಾಗಿದ್ದು , ಪ್ರತಿಯೊಬ್ಬ ಪ್ರಜೆಯು ಗೌರವದಿಂದ ಬಾಳುವಂತಹ ಪರಿಸ್ಥಿತಿಯನ್ನು ನಿರ್ಮಿಸುವುದು ನಮ್ಮ ಸರಕಾರದ ಉದ್ದೇಶವಾಗಿದೆ ಎಂದರು.
ಸಂಸ್ಕೃತಿ, ಪರಂಪರೆ, ಆಧ್ಯಾತ್ಮ ನಮ್ಮ ದೇಶದ ಬಹು ಮುಖ್ಯ ಶಕ್ತಿಯಾಗಿದ್ದು, ಈ ಶಕ್ತಿಯಿಂದಲೇ 21ನೇ ಶತಮಾನದಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಬೇಕಿದೆ. ನಮ್ಮಲ್ಲಿ ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲ ಹೇರಳವಾಗಿದ್ದು , ಈ ಸಂಪನ್ಮೂಲಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವಂತಹ ಯೋಜನೆಗಳು ಕಾರ್ಯಗತಗೊಳ್ಳಬೇಕಾಗಿದೆ. ಸನಾತನ ಶಿಕ್ಷಣ ವ್ಯವಸ್ಥೆ ನಾಶದಿಂದ ನಮ್ಮಲ್ಲಿ ಸ್ವಾಭಿಮಾನ ಕೊರತೆಯಾಗಿದ್ದು, ಈ ವಿಷಯದ ಬಗ್ಗೆ ಸಮಗ್ರವಾಗಿ ಚಿಂತಿಸಿ, ಪಠ್ಯಕ್ರಮದಲ್ಲಿ ಆಧ್ಯಾತ್ಮಿಕ , ಸಾಂಸ್ಕೃತಿಕ, ಐತಿಹಾಸಿಕ ವಿಷಯಗಳನ್ನು ಅಳವಡಿಸಬೇಕಿದೆ ಎಂದು ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಲಾರ್ಡ್ ಮೆಕಾಲೇ ಹೇಳಿದ ಮಾತು ಅಕ್ಷರಶ: ಸತ್ಯವಾಗಿದ್ದು , ಈ ಭಾಷಣದ ಪ್ರತಿಯನ್ನು ನಮ್ಮ ಯುವಜನಾಂಗಕ್ಕೆ ತಿಳಿಸುವ ನಿಟ್ಟಿನಲ್ಲಿ ಎಲ್ಲಾ ಕಾಲೇಜುಗಳಿಗೆ ಭಾಷಣದ ಪ್ರತಿಯನ್ನು ತಲುಪಿಸುವ ಕೆಲಸವನ್ನು ಮಾಡಲಾಗುವುದು ಎಂದರು.
ಮುಖ್ಯ ಭಾಷಣಕಾರರಾದ ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರು, ವೈಯಕ್ತಿಕ ರಾಜಕೀಯ ಸಿದ್ಧಾಂತಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಭಯೋತ್ಫಾದನೆಯನ್ನು ಎದುರಿಸಬೇಕು. ದೇಶದ್ರೋಹಿಗಳನ್ನು ಎದುರಿಸುವಾಗ ಐಕ್ಯತೆಯನ್ನು ಮೆರೆಯಬೇಕು. ರಾಜಕೀಯ ಚಿಂತನೆ ವಿಭಿನ್ನವಾಗಿದ್ದರೂ, ಒಳ್ಳೆಯ ಕೆಲಸಕ್ಕೆ ಎಲ್ಲರ ಬೆಂಬಲದ ಅಗತ್ಯ ವಿದೆ. ಭಯೋತ್ಪಾಧನೆಗೆ ಮರಣದಂಡನೆಯೇ ಸೂಕ್ತ ಶಿಕ್ಷೆ. ಇತ್ತೀಚಿನ ದಿನಗಳಲ್ಲಿ ಭಯೋತ್ಪಾಧನಾ ಪಿಡುಗು ದೇಶವನ್ನು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದರೂ, ಮುಂಬೈ ಭಯೋತ್ಪಾಧನೆ ದೇಶಕ್ಕಾದ ಅವಮಾನ ಎಂಬ ಭಾವನೆ ಪ್ರತಿಯೊಬ್ಬ ಭಾರತೀಯನಲ್ಲೂ ಮೂಡಿದ್ದು , ಭಯೋತ್ಪಾಧನೆ ವಿರುದ್ದ ದೇಶವೇ ಒಂದಾಗಿ ನಿಂತಿದೆ ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications