ಹೊಗೇನಕಲ್ ವಿವಾದ ; ಕರ್ನಾಟಕದ ಮುಖಕ್ಕೆ ಸುಣ್ಣ
ಬೆಂಗಳೂರು, ಫೆ. 17 : ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಣ ಗಡಿರೇಖೆ ಸ್ಪಷ್ಟ ಚಿತ್ರಣ ಇನ್ನೂ ಇಲ್ಲದೇ ಇರುವಾಗಲೇ ಮತ್ತು ಕರ್ನಾಟಕದ ಭಾರಿ ವಿರೋಧದ ನಡುವೆಯೂ ಕೇಂದ್ರ ಸರಕಾರ ವಿವಾದಿತ ಹೊಗೇನಕಲ್ ಯೋಜನೆಗೆ ಹಸಿರು ನಿಶಾನೆ ನೀಡಿದೆ. ಪ್ರಸಕ್ತ ಸಾಲಿನ ಮುಂಗಡಪತ್ರದಲ್ಲಿ ತಮಿಳುನಾಡಿಗೆ ಜಪಾನ್ ದೇಶದ 1,334 ಕೋಟಿ ರೂಪಾಯಿ ಸಾಲ ಮಂಜೂರಾತಿಗೆ ತನ್ನ ಅಧಿಕೃತ ಅನುಮೋದನೆ ನೀಡಿ ಕರ್ನಾಟಕದ ವಿರುದ್ಧ ಮತ್ತೊಮ್ಮೆ ಮಲತಾಯಿ ಧೋರಣೆ ತಾಳಿದೆ. ಇದರಿಂದ ಕರ್ನಾಟಕದ ಭೂಪ್ರದೇಶ ಮುಳುಗಡೆ ಆಗುವ ಶಂಕೆ ಇದ್ದರೂ ಕೇಂದ್ರ ಇದಾವುದನ್ನೂ ಪರಿಗಣಿಸದೆ ಇರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಅಷ್ಟೇ ಅಲ್ಲದೆ ಚೆನ್ನೈನಲ್ಲಿ ಸ್ಥಾಪಿಸಲಾಗುವ "ಇಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳ್" ಗೆ ಮುಂಗಡಪತ್ರದಲ್ಲಿ 15 ಕೋಟಿ ನೀಡಿದರೆ, ಕನ್ನಡಕ್ಕೆ ಬರೀ ಶಾಸ್ತ್ರೀಯ ಭಾಷೆ ಎಂದು ಸ್ಥಾನಮಾನವನ್ನು ಘೋಷಣೆ ಮಾಡಿ ನಯಾಪೈಸೆ ಮುಂಗಡಪತ್ರದಲ್ಲಿ ಮೀಸಲಿಡದೇ ತಾರತಮ್ಯ ಮೆರೆದಿದೆ.
ಮೂಲ ಯೋಜನೆ ಧರ್ಮಪುರಿ ಜಿಲ್ಲೆಯ 30 ಲಕ್ಷ ಜನರಿಗೆ ಕುಡಿಯುವ ನೀರಿನ ಪೂರೈಕೆ ಮಾಡುವ ಯೋಜನೆ ಎಂದಿದ್ದ ಕರುಣಾನಿಧಿ ಸರಕಾರ, ಈಗ ಪಕ್ಕದ ಕೃಷ್ಣಗಿರಿ ಜಿಲ್ಲೆಯನ್ನೂ ಯೋಜನೆ ವ್ಯಾಪ್ತಿಗೆ ತಂದಿದೆ. ಟೆಂಡರ್ ಸೇರಿದಂತೆ ವಿವಾದಾತ್ಮಕ ಹೊಗೇನಕಲ್ ಯೋಜನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಬೇಕು. ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಅನುಮತಿ ನೀಡಿದ್ದ ಯೋಜನೆ ಮತ್ತು ಈಗ ಜಾರಿಯಾಗುತ್ತಿರುವ ಯೋಜನೆ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎಂದು ಕರ್ನಾಟಕ ಸರಕಾರ ಬೊಬ್ಬೆ ಹೊಡೆಯುತ್ತಿದ್ದರೂ ಸೊಪ್ಪು ಹಾಕದೆ ತಮಿಳುನಾಡು ಸರ್ಕಾರ ಯೋಜನೆ ಕೆಲಸವನ್ನು ಭರದಿಂದ ಮುಂದುವರಿಸಿದೆ.
ಬೆಂಗಳೂರು ನಗರಕ್ಕೆ ಜೀವನದಿಯಾಗಿರುವ ಕಾವೇರಿ ನೀರು ಹಂಚಿಕೆ ವಿಷಯದಲ್ಲೂ ಈ ಹಿಂದೆ ತಕರಾರು ಎತ್ತಿದ್ದ ತಮಿಳುನಾಡು, ಬೆಂಗಳೂರು ನಗರದ ಎಲ್ಲಾ ಭಾಗವು ಕಾವೇರಿ ಕಣಿವೆಯ ಅಡಿಯಲ್ಲಿ ಇಲ್ಲದೇ ಇರದ ಕಾರಣ ಕಣಿವೆ ಹೊರಗಿನ ಯೋಜನೆಗೆ ಕಾವೇರಿ ನೀರನ್ನು ಬಳಸುವುದು ಕಾನೂನುಬಾಹಿರ ಎಂದು ಪ್ರತಿಭಟಿಸಿತ್ತು. ಆದರೆ ಈಗ ಧರ್ಮಪುರಿ ಜಿಲ್ಲೆಯಲ್ಲಿ ತಮಿಳುನಾಡು ಸರಕಾರ ಕಾನೂನು ಉಲ್ಲಂಘನೆ ಕೆಲಸಕ್ಕೆ ಕೈಹಾಕಿದ್ದರೂ ಕೇಂದ್ರ ಸರಕಾರ ಸುಮ್ಮನೇ ಇರುವುದು ಮತ್ತು ಅದಕ್ಕಿಂತಲೂ ಹೆಚ್ಚಾಗಿ ರಾಜ್ಯದ ರಾಜಕಾರಣಿಗಳು ಸುಮ್ಮನಿರುವುದು ನಾಚಿಕೆಗೇಡು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications