ಬೆಂಗಳೂರಿನ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ

ಇದು ಬೆಂಗಳೂರಿನ ಮೂಲಸೌಕರ್ಯ ಉತ್ತಮ ಮಟ್ಟಕ್ಕೆ ತರಲು ಯುವತಂಡ ಕಟ್ಟಿ ಶ್ರಮಿಸುತ್ತಿರುವ 'ಲೀಡ್ ಇಂಡಿಯಾ'ದ ಹರಿಕಾರ ಆರ್ ಕೆ ಮಿಶ್ರಾ ಅವರ ಖಚಿತ ಅಭಿಪ್ರಾಯ ಮಾತ್ರವಲ್ಲ ಕಳಕಳಿಯ ಮನವಿ. ವ್ಯಾಪ್ತವಾದ ಯೋಜನೆ, ಸುಧಾರಿತ ಪೌರ ಸೇವೆ, ಹೆಚ್ಚಿನ ಬಂಡವಾಳದ ಮುಖಾಂತರ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಜೆಂಡಾ ಫಾರ್ ಬೆಂಗಳೂರು ಇನ್ಫ್ರಾಸ್ಟ್ರಕ್ಚರ್ ಅಂಡ್ ಡೆವಲಪ್ಮೆಂಟ್ (ABIDe) ಎಂಬ ಕಾರ್ಯಪಡೆಯನ್ನು ರಚಿಸಲಾಗಿದೆ. ಇದರಲ್ಲಿ ಉಪಾಧ್ಯಕ್ಷರಾಗಿ ಸಂಸದ ಅನಂತಕುಮಾರ್, ಸಂಚಾಲಕರಾಗಿ ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ವಿಷನ್ 2020 ಕನಸಿನಡಿ ಬೆಂಗಳೂರಿನ ಅಭಿವೃದ್ಧಿಗಾಗಿ ನೀಲಿನಕ್ಷೆಯನ್ನು ತಯಾರಿಸುವ ಹೊಣೆಗಾರಿಕೆಯನ್ನು ಈ ಕಾರ್ಯಪಡೆ ಹೊತ್ತಿದೆ.
ಈ ಕಾರ್ಯಪಡೆಗೆ ಬೆಂಗಳೂರಿನ ವಾಹನ ಸಂಚಾರ ಮತ್ತು ಸೌಕರ್ಯಗಳಿಗೆ ಸಂಬಂಧಿಸಿದಂತೆ ಸಲಹೆ ನೀಡುವ ಮತ್ತು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಜವಾಬ್ದಾರಿಯನ್ನು ಆರ್.ಕೆ.ಮಿಶ್ರಾ ಮತ್ತು ಐಐಎಮ್-ಬಿಯ ಅಶ್ವಿನ್ ಮಹೇಶ್ ಎಂಬುವವರಿಗೆ ವಹಿಸಲಾಗಿದೆ. ಉದ್ಯಾನ ನಗರಿಯ ವಾಹನದಟ್ಟಣೆ ಸರಳಗೊಳಿಸಲು ಅವರು ಇಲ್ಲಿ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಸಲಹೆಗಳು ಕೆಳಗಿನಂತಿವೆ
1) ಬೆಂಗಳೂರಿಗರು ಎದುರಿಸುತ್ತಿರುವ ವಾಹನದಟ್ಟಣೆ ಸಮಸ್ಯೆಗೆ ಸಾರ್ವಜನಿಕ ಬಸ್ ಸೌಲಭ್ಯ ಬಳಸುವುದೇ ಅತ್ಯುತ್ತಮ ಪರಿಹಾರ.
2) ಅತೀವ ದಟ್ಟಣೆಯಿರುವ 10 ಪ್ರಮುಖ ಮೇಲ್ರಸ್ತೆಗಳನ್ನು 'ಬಿಗ್ 10' ರಸ್ತೆಗಳೆಂದು ಗುರುತಿಸಲಾಗಿದೆ. ಇವುಗಳ ಮೇಲಿನ ವಾಹನ ಸಂಚಾರವನ್ನು ಸುಗಮಗೊಳಿಸಲು ಬಿಗ್ 10 ರಸ್ತೆಗಳನ್ನು ಜಂಕ್ಷನ್ ಮತ್ತು ಸಿಗ್ನಲ್ ಮುಕ್ತವಾಗಿ ಮಾಡಲಾಗುವುದು.
3) ಬಿಗ್ 10 ಪಥದಲ್ಲಿ ಬಸ್ ಲೇನ್, ಶೆಲ್ಟರ್, ಪಾದಚಾರಿಗಳ ರಸ್ತೆ, ಸುರಕ್ಷಿತ ರಸ್ತೆದಾಟುಗಳು, ಸೈಕಲ್ ಪಥ (ಪ್ರಸ್ತಾವನೆ)ಗಳನ್ನು ಒದಗಿಸಲಾಗುವುದು. ಈ ಕಾರ್ಯ ಪೂರೈಸಲು 3, 6, 12, 18 ಮತ್ತು 24 ತಿಂಗಳ ಗಡುವು ನೀಡಲಾಗಿದೆ.
4) ಬಿಗ್ 10 ಬಸ್ ಸೇವೆಯನ್ನು ವೆಲ್ಲಾರ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ ಸಿಟಿ, ಹಾಗು ಎಚ್ಎಎಲ್ ಏರ್ಪೋರ್ಟ್ ರಸ್ತೆಯ ಮೇಲೆ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಈ ಸೇವೆ ಹೆಚ್ಚಿನ ಜನಪ್ರಿಯತೆ ಗಳಿಸುತ್ತಿದೆ. ಮುಂದಿನವಾರ ಬನ್ನೇರುಘಟ್ಟ ರಸ್ತೆಯಲ್ಲಿ ಬಿಗ್ 10 ಸೇವೆ ಪ್ರಾರಂಭವಾಗಲಿದೆ. ಇನ್ನೆರಡು ತಿಂಗಳಲ್ಲಿ ಉಳಿದ ಸೇವೆಗಳೂ ಎಸಿ ಮತ್ತು ಎಸಿ ರಹಿತ ಬಸ್ ಗಳಿಗಾಗಿ ಅನುಷ್ಠಾನಕ್ಕೆ ಬರಲಿವೆ.
5) ಕೇಂದ್ರ ಸಾರಿಗೆ ಮತ್ತು ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ ಬಸ್ ನಿಲ್ದಾಣದಿಂದಲೂ ಬಿಗ್ 10 ಬಸ್ ಸೇವೆಯನ್ನು ಪಡೆಯಬಹುದಾಗಿದೆ. ಈ ಸೇವೆ ಬಳಸುವ ಮುಖಾಂತರ ಖಾಸಗಿ ವಾಹನವಿಲ್ಲದೆ ಎಲ್ಲೆಂದರಲ್ಲಿ ಸಂಚರಿಸಬಹುದಾಗಿದೆ.
ಕಚೇರಿಗೆ ಸಂಚರಿಸುವ ಪ್ರತಿಯೊಬ್ಬರೂ ಖಾಸಗಿ ವಾಹನ ಬಳಸದೆ ಸಾರ್ವಜನಿಕ ಬಸ್ ಸೌಕರ್ಯವನ್ನು ಬಳಸಬೇಕು. ಇದರಿಂದ ಮಾತ್ರ ವಾಹನದಟ್ಟಣೆ ಕಡಿಮೆಗೊಳಿಸಲು ಸಾಧ್ಯ. ರಸ್ತೆ ಎಷ್ಟೇ ಅಗಲಗೊಳಿಸಿದರೂ ಖಾಸಗಿ ವಾಹನ ಬಳಕೆಯಿಂದ ವಾಹನದಟ್ಟಣೆ ಕರಗಿಸಲು ಸಾಧ್ಯವಿಲ್ಲ ಎಂದು ಆರ್.ಕೆ.ಮಿಶ್ರಾ ಸಾರ್ವಜನಿಕರನ್ನು ಕೇಳಿಕೊಂಡಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಈ ಕೊಂಡಿ ಕ್ಲಿಕ್ಕಿಸಿ
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications