ಲೋಕಸಭೆ ಚುನಾವಣೆಗೆ ರಂಗ ತಾಲೀಮು
ಬೆಂಗಳೂರು, ಫೆ. 16 ಲೋಕಸಭೆ ಚುನಾವಣೆಗಳು ಸಮೀಪಿಸಿತೊಡಗಿದ್ದು, ಗೆಲ್ಲುವ ಅಭ್ಯರ್ಥಿಗಳಿಗಾಗಿ ಮೂರು ಪ್ರಮುಖ ಪಕ್ಷಗಳಲ್ಲಿ ಭಾರಿ ಹುಡುಕಾಟ ಆರಂಭವಾಗಿದೆ. ಆಡಳಿತರೂಢ ಬಿಜೆಪಿಗೂ ಕೂಡ ಗೆಲ್ಲುವ ಅಭ್ಯರ್ಥಿಗಳು ಶೋಧನಕಾರ್ಯ ದೊಡ್ಡ ಸಮಸ್ಯೆಯಾಗಿಯೇ ಪರಿಣಮಿಸಿದೆ. ಕಾಂಗ್ರೆಸ್ ನಿಂದ ಹಿರಿಯ ಹುಲಿಗಳೆಲ್ಲಾ ಕಣಕ್ಕಿಳಿಯುವ ಸಾದ್ಯತೆಗಳಿವೆ. ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಸೂಕ್ತ ಎನ್ನುವ ಅಭ್ಯರ್ಥಿಗಳು ಕೊರತೆ ಎದ್ದು ಕಾಣತೊಡಗಿದೆ.
ಕಂದಾಯ ಸಚಿವ ಕರುಣಾಕರರೆಡ್ಡಿ ಸೇರಿ 18 ಮಂದಿ ಬಿಜೆಪಿ ಸಂಸದರು ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ, ಅದರಲ್ಲಿ ಎಚ್ ಟಿ ಸಾಂಗ್ಲಿಯಾನ, ಮಂಜುನಾಥ್ ಕುನ್ನೂರು, ಮನೋರಮಾ ಮಧ್ವರಾಜ ಪಕ್ಷದಿಂದ ಉಚ್ಚಾಟನೆಗೊಂಡಿದ್ದರೆ, ಚಿಕ್ಕಮಗಳೂರು ಸಂಸದರಾಗಿದ್ದ ಶ್ರೀಕಂಠಪ್ಪ ನಿಧನರಾಗಿದ್ದಾರೆ. ತುಮಕೂರು ಸಂಸದ ಮಲ್ಲಿಕಾರ್ಜುಯ್ಯ ಅವರು ಅನಾರೋಗ್ಯದಿಂದ ಬಳಲುತ್ತಿರುವುದು ಬಿಜೆಪಿ ಪಾಳೆಯಕ್ಕೆ ನುಂಗಲಾರದ ತುತ್ತಾಗಿದೆ.
ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಹಾಸನ, ಚಿತ್ರದುರ್ಗ, ಬಳ್ಳಾರಿ, ಹಾವೇರಿ ಹಾಗೂ ಕೋಲಾರದಲ್ಲಿ ಅಭ್ಯರ್ಥಿಗಳೆ ಇಲ್ಲದಂತಾಗಿದೆ. ತುಮಕೂರಿಗೆ ನಟ ಜಗ್ಗೇಶ್ ಇಲ್ಲವೇ ಮಾಜಿ ಸಚಿವ ಸಿ ಚೆನ್ನಿಗಪ್ಪ ಅವರು ಸ್ಪರ್ಧಿಸುವ ಸಾಧ್ಯತೆಗಳಿವೆ.
ಬೆಂಗಳೂರು ಉತ್ತರಕ್ಕೆ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಚಲ, ಕೋಲಾರಕ್ಕೆ ಹಾಲಿ ಕಾಂಗ್ರೆಸ್ ಶಾಸಕ ಡಿ ಸುಧಾಕರ್ ಬಿಜೆಪಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಹಾಸನದಲ್ಲಿ ದೇವೇಗೌಡರ ವಿರುದ್ಧ ಮಾಜಿ ಸಚಿವ ಬಿ ಶಿವರಾಂ ಅವರನ್ನು ಪಕ್ಷಕ್ಕೆ ಸೆಳೆದುಕೊಂಡು ಅಖಾಡಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ.
ಈ ಮಧ್ಯೆ ಜೆಡಿಎಸ್ ಕೂಡಾ ಭರ್ಜರಿ ತಯಾರಿ ನಡೆಸುತ್ತಿದ್ದು, ಬೆಂಗಳೂರು ಗ್ರಾಮಾಂತರಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಂಡ್ಯಕ್ಕೆ ಚೆಲುವರಾಯಸ್ವಾಮಿ, ಬೆಂಗಳೂರು ಕೇಂದ್ರಕ್ಕೆ ಶಾಸಕ ಜಮೀರ್ ಅಹ್ಮದ್ ಖಾನ್, ಹಾಸನಕ್ಕೆ ದೇವೇಗೌಡ, ಮೈಸೂರು ಹಾಲಿ ಶಾಸಕ ಸಾ ರಾ ಮಹೇಶ್, ಬೆಂಗಳೂರು ಉತ್ತರಕ್ಕೆ ಕೆ ಸಿ ರಾಮಮೂರ್ತಿ, ಹಾವೇರಿಗೆ ಹುಲಿನಾಯ್ಕರ್, ಕೋಲಾರ, ರಾಯಚೂರು ಹಾಗೂ ಕೊಪ್ಪಳಕ್ಕೆ ಸೂಕ್ತ ಅಭ್ಯರ್ಥಿಗಳ ಹುಡುಕಾಟ ಆರಂಭವಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆಗೆ ಕಾಂಗ್ರೆಸ್ ಏಕಾಂಗಿ ಸ್ಪರ್ಧೆ, ಕೃಷ್ಣ












Click it and Unblock the Notifications