ಬಳ್ಳಾರಿಯಲ್ಲಿ ರೈತರ ಮೇಲೆ ಲಾಠಿ ಏಟು
ಬಳ್ಳಾರಿ, ಫೆ. 15 : ವಿಮಾನ ನಿಲ್ದಾಣಕ್ಕೆ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ಖಂಡಿಸಿ ಇಂದು ಗಾಜನೂರು ಮತ್ತು ಶಿರವಾರ ರೈತರು ನಗರದಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಕೈಮೀರಿದ್ದರಿಂದ ಪೊಲೀಸರು ಅಶ್ರುವಾಯು ಸಿಡಿಸಿ ಲಘು ಲಾಠಿ ಪ್ರಹಾರ ಮಾಡಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ರೈತರು ಮತ್ತು ಪೊಲೀಸರೊಂದಿಗೆ ನಡೆದ ವಾಗ್ವಾದದಲ್ಲಿ ರೈತರು ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರಿಗೆ ಗಾಯವಾಗಿರುವ ಘಟನೆ ವರದಿಯಾಗಿದೆ.
ಬಿಜೆಪಿ ಸರ್ಕಾರ ರಾಜ್ಯದ ಪ್ರಮುಖ ನಗರಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲೂ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಪೂರ್ಣ ತಯಾರಿ ನಡೆಸಿದ್ದು, ಭೂಮಿ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದೆ. ಆದರೆ, ಶಿರವಾರ ಮತ್ತು ಗಾಜನೂರು ರೈತರು ತಮ್ಮ ಭೂಮಿಯನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ನೀಡಲು ಸುತಾರಾಂ ತಯಾರಿಲ್ಲ. ಸಂಜೀವಿನಿಯಾಗಿ ನೀರಾವರಿ ಭೂಮಿಯನ್ನು ಕೊಟ್ಟು ನಾವೆಲ್ಲಿಗೆ ಹೋಗಬೇಕು. ಯಾವ ಕಾರಣಕ್ಕೂ ಭೂಮಿ ವಶಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ರೈತರು ಪಟ್ಟುಹಿಡಿದಿದ್ದಾರೆ. ಇದರಿಂದ ಇಂದು ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ಲಾಠಿ ಪ್ರಹಾರ ನಡೆಸುವ ಮಟ್ಟಕ್ಕೆ ತಲುಪಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈ ಸ್ಥಳ ಸೂಕ್ತವಾಗಿದೆ. ಇಲ್ಲಿಯೇ ವಿಮಾನ ನಿಲ್ದಾಣ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಭೂಮಿ ವಶಕ್ಕೆ ಸಂಬಂಧಿಸಿಂತೆ ರೈತರು ಮೇಲೆ ದೌರ್ಜನ್ಯ ನಡೆಸಿಲ್ಲ. ರೈತರ ಮನವೊಲಿಸುವ ಯತ್ನ ನಡೆದಿದೆ. ಕೆಲ ಗೂಂಡಾಗಳು ಈ ಕೃತ್ಯ ಎಸಗಲು ಪ್ರೆರೇಪಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ವಿರೋಧ
ಸರ್ಕಾರ ಕೈಗೊಂಡು ವಿಮಾನ ನಿಲ್ದಾಣಕ್ಕೆ ನಿರ್ಮಾಣಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ರೈತರು ಸಂಜೀವಿನಯಾಗಿರುವ ಈ ನೆಲದಲ್ಲಿ ನಿಲ್ದಾಣ ಸ್ಥಾಪನೆ ಬೇಡ. ಬಳ್ಳಾರಿ ಹೊಸಪೇಟೆ ಮಧ್ಯೆ ಸಾವಿರಾರು ಎಕರೆ ಬಯಲು ಜಾಗವಿದೆ, ಅಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿ. ಅದನ್ನು ಬಿಟ್ಟು ರೈತರ ಜೀವನಾಡಿಯಾಗಿರುವ ನೀರಾವರಿ ಭೂಮಿಗೆ ಸರ್ಕಾರ ಕೈಹಾಕಿರುವುದು ಸರಿಯಲ್ಲ ಎಂದು ಬಳ್ಳಾರಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಪ್ರತಾಪ್ ರೆಡ್ಡಿ ಕಿಡಿಕಾರಿದರು. ಒಟ್ಟಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಿಧಾನವಾಗಿ ರಾಜಕೀಕರಣಗೊಳ್ಳತೊಡಗಿದೆ. ಮುಂದಿನ ದಿನಗಳಲ್ಲಿ ಇದರ ಕಾವು ಇನ್ನಷ್ಟು ಹೆಚ್ಚುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications