ಬಜೆಟ್ ದಿನವೇ ರೈಲು ಅಪಘಾತ;16 ಸಾವು
ಭುವನೇಶ್ವರ, ಫೆ.14: ಮಧ್ಯಂತರ ರೈಲ್ವೆ ಬಜೆಟ್ ಮಂಡನೆ ವೇಳೆ ರೈಲ್ವೆ ಪ್ರಯಾಣಿಕರಿಗೆ ಸುರಕ್ಷತೆ ನೀಡುವುದಾಗಿ ಹಾಗೂ ಈ ವರ್ಷ ರೈಲು ಅಪಘಾತಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಲಾಲೂ ಎದೆ ತಟ್ಟಿಕೊಂಡು ಹೇಳಿದ್ದರು. ಆದರೆ ಕಾಕತಾಳೀಯವೆಂಬಂತೆ ಕೆಲವೇ ತಾಸುಗಳಲ್ಲಿ ರೈಲೊಂದು ಹಳಿತಪ್ಪಿ 16 ಮಂದಿ ಮೃತಪಟ್ಟು 161 ಮಂದಿ ಗಾಯಗೊಂಡ ಘಟನೆ ಒರಿಸ್ಸಾದಲ್ಲಿ ಶುಕ್ರವಾರ ಸಂಭವಿಸಿದೆ.
ಹೌರಾದಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ಕೋರಮಂಡಲ್ ಎಕ್ಸ್ ಪ್ರೆಸ್ ನ 18 ಬೋಗಿಗಳು ಹಳಿ ತಪ್ಪಿ ಇದುವರೆಗೂ 16 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ರೈಲು ಅತಿವೇಗವಾಗಿ ಸಾಗುತ್ತಿದ್ದುದೇ ಅಪಘಾತಕ್ಕೆ ಕಾರಣ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ರೈಲ್ವೆ ಸಚಿವರು ತನಿಖೆಗೆ ಆದೇಶಿಸಿದ್ದಾರೆ.
ಮೃತಪಟ್ಟ ಕುಟುಂಬದವರಿಗೆ ತಲಾ 5 ಲಕ್ಷ ರು.ಪರಿಹಾರ ಹಾಗೂ ಒಬ್ಬರಿಗೆ ರೈಲ್ವೆಯಲ್ಲಿ ಕೆಲಸ ನೀಡುವುದಾಗಿ ಘೋಷಿಸಲಾಗಿದೆ. ತೀವ್ರವಾಗಿ ಗಾಯಗೊಂಡವರಿಗೆ ರು.50 ಸಾವಿರ ಪರಿಹಾರ ನೀಡಲಾಗುತ್ತದೆ.ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಸ್ಥಳಕ್ಕೆ ವೈದ್ಯರ ತಂಡ ಆಗಮಿಸಿದೆ. ಘಟನೆಯ ವಿವರ ಪಡೆಯಲು ಸಹಾಯವಾಣಿ (033) 26411416, 26413660; (044) 25024545, 25024548, 25357387, 25354854.
(ಏಜೆನ್ಸೀಸ್)












Click it and Unblock the Notifications