ಮುಂಬೈ ದಾಳಿ ಪಾಕ್ ನೆಲದಿಂದ ಸಂಚು ಪಾಕ್ ಒಪ್ಪಿಗೆ
ಇಸ್ಲಾಮಾಬಾದ್, ಫೆ. 12 : ಕೊನೆಗೂ ಪಾಪಿ ಪಾಕ್ ಗೆ ಕೆಟ್ಟ ಮೇಲೆ ಬುದ್ಧಿ ಬಂತು. ಭಯೋತ್ಪಾದನೆ ಹತ್ತಿಕ್ಕುವ ಕುರಿತು ಭಾರತ ಸೇರಿದಂತೆ ಅಂತಾರಾಷ್ಟ್ರೀಯ ವಲಯದಿಂದ ಬಂದಿರುವ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ ಸರ್ಕಾರ, ಮುಂಬೈ ಮೇಲೆ ದಾಳಿ ನಡೆಸಲು ಪಾಕ್ ನೆಲದಿಂದಲೇ ಸಂಚು ರೂಪಿಸಿರುವ ಸತ್ಯವನ್ನು ಒಪ್ಪಿಕೊಂಡಿದೆ.
ಇಂದು ಪತ್ರಿಕಾಗೋಷ್ಠಿ ನಡೆಸಿದ ಪಾಕಿಸ್ತಾನ ಆಂತರಿಕ ಇಲಾಖೆ ಸಚಿವ ರೆಹಮಾನ್ ಮಲಿಕ್, ಕಳೆದ ವರ್ಷ ಮುಂಬೈನಲ್ಲಿ ನಡೆದ ಭಯೋತ್ಪಾದನೆಯ ಸಂಚನ್ನು ಪಾಕ್ ನೆಲದಿಂದಲೇ ರೂಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಭಾರಿ ಬಿಗಿ ಭದ್ರತೆಯೊಂದಿಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತ ಕಳುಹಿಸಿದ ಸಾಕ್ಷ್ಯಾಧಾರಗಳನ್ನು ಸಂಪೂರ್ಣ ಪರಿಶೀಲನೆ ನಡೆಸಲಾಗಿದೆ. ಮುಂಬೈ ಭಯೋತ್ಪಾದನೆ ಪಾಕ್ ನೆಲದ ಒಂದು ಭಾಗದಿಂದ ನಡೆದಿರುವುದು ದೃಢಪಟ್ಟಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಭಾರತದ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಕಸಬ್ ಸೇರಿದಂತೆ ಒಟ್ಟು ಏಳು ಮಂದಿ ವಿರುದ್ಧ ಎಫ್ಐಆರ್ (01/2009) ದಾಖಲಿಸಲಾಗಿದ್ದು, ಭಯೋತ್ಪಾದನಾ ನಿಗ್ರಹ ಘಟಕ ಸಾಂಬಾಗೆ ವಹಿಸಲಾಗಿದೆ ಎಂದು ರೆಹಮಾನ್ ತಿಳಿಸಿದ್ದಾರೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಭಾರತ ಇನ್ನೊ 30 ಪ್ರಶ್ನೆಗಳಿಗೆ ಉತ್ತರಿಸಿಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. ಪಾಕ್ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದ್ದು. ಇಂದು ಸಂಜೆ ಕೇಂದ್ರ ಉನ್ನತ ಮಟ್ಟದ ಸಭೆ ನಡೆಯಲಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂಕೆ ನಾರಾಯಣನ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications