ಅಲ್ ಖೈದಾ ಬೆದರಿಕೆಗೆ ಬಗ್ಗುವುದಿಲ್ಲ, ಭಾರತ
ನವದೆಹಲಿ, ಫೆ. 10 : ಅಲ್ ಖೈದಾ ನೀಡಿರುವ ಗೊಡ್ಡು ಬೆದರಿಕೆಗೆ ಬಗ್ಗುವುದಿಲ್ಲ. ಈ ಹಿಂದೆ ಅನೇಕ ಸಾರಿ ಅಲ್ ಖೈದಾ ಈ ರೀತಿ ಅರಿವೆ ಹಾವುಗಳನ್ನು ಬಿಟ್ಟಿದೆ. ಅದಕ್ಕೂ ಮೀರಿ ಅಲ್ ಖೈದಾ ದಾಳಿ ನಡೆಸಲು ಮುಂದಾದಲ್ಲಿ ಸರ್ವನಾಶ ಖಚಿತ ಎಂದು ಭಾರತ ಪ್ರತಿ ಸವಾಲು ಹಾಕಿದೆ.
ಅಲ್ ಖೈದಾ ಸಂಘಟನೆಯ ಕಮಾಂಡರ್ ನೀಡಿರುವ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಭಾರತದ ಗುಪ್ತಚರ ಇಲಾಖೆ ಹಿರಿಯ ಅಧಿಕಾರಿಗಳು, ಇದೊಂದು ಗೊಡ್ಡು ಬೆದರಿಕೆ. ಹೆದರಿಸುವ ತಂತ್ರ ಅಷ್ಟೆ. ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಮೂಲದ ವ್ಯಕ್ತಿಗಳ ಕೈವಾಡವಿದೆ ಹಾಗೂ ಪಾಕ್ ನಲ್ಲಿ ನೆಲೆಸಿರುವ ಭಯೋತ್ಪಾದಕರನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಭಾರತ ಈ ಕ್ಷಣದವರೆಗೂ ಒತ್ತಡ ಹೇರಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಒತ್ತಡವನ್ನು ತರುತ್ತೇವೆ. ಆದರೆ ಯಾವ ಕಾರಣಕ್ಕೂ ರಾಜಿ ಮಾತೇ ಇಲ್ಲ. ಅಗತ್ಯ ಬಿದ್ದರೆ ಯುದ್ಧಕ್ಕೂ ಸಜ್ಜಾಗಿ ಎಂದು ಹೆಸರು ಹೇಳಲು ಇಚ್ಛಿಸದ ಗುಪ್ತಚರ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಸೇನಾಪಡೆ ಎಂತಹ ದಾಳಿಯನ್ನೂ ಎದುರಿಸುವ ಸಾಮರ್ಥ್ಯದ ಜೊತೆಗೆ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿ ಜಯ ಗಳಿಸುವ ಆತ್ಮವಿಶ್ವಾಸವನ್ನು ಹೊಂದಿದೆ. ಅಲ್ ಖೈದಾ ನೀಡಿರುವ ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಮೇಲೆ ಸೇನಾ ಕಾರ್ಯಚರಣೆ ನಡೆಸಿದರೆ ಭಾರತ ಭಾರಿ ಬೆಲೆ ತೆರಲಿದೆ ಎಂದು ಅಲ್ ಖೈದಾ ಸಂಘಟನೆ ಇಂದು ಬೆಳಗ್ಗೆ ಎಚ್ಚರಿಕೆ ನೀಡಿರುವ ವಿಡಿಯೋ ಚಿತ್ರಣವೊಂದನ್ನು ಬಿಡುಗಡೆ ಮಾಡಿತ್ತು.
(ಏಜೆನ್ಸೀಸ್)
ಪಾಕ್ ಮೇಲೆ ದಾಳಿಗಿಳಿದರೆ ಹುಷಾರ್, ಆಲ್ ಖೈದಾ












Click it and Unblock the Notifications