ಮಾಧ್ಯಮಗಳ ಮೇಲೆ ನಿಗಾಕ್ಕೆ ಮುಂದಾದ ಸರ್ಕಾರ
ಬೆಂಗಳೂರು, ಫೆ. 9 : ಮಂಗಳೂರು ಪಬ್ ದಾಳಿ ಪ್ರಕರಣ ಹಾಗೂ ಪ್ರೇಮಿಗಳ ದಿನಾಚರಣೆಗೆ ಸಂಬಂಧಿಸಿದಂತೆ ಶ್ರೀರಾಮಸೇನೆ ಅವಾಂತರ ಆರುವ ಮುನ್ನವೇ ರಾಜ್ಯ ಸರ್ಕಾರ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. ಇದೀಗ ಮಾಧ್ಯಮಗಳ ಮೇಲೆ ಕೆಂಗಣ್ಣು ಬೀರಿರುವ ಸರ್ಕಾರ ಅತೀ ರಂಜಿತ ವರದಿಗಳ ಪ್ರಸಾರ ಮಾಡಿದ್ದಾರೆಂಬ ಎನ್ನುವ ನೆಪದಲ್ಲಿ ಪತ್ರಿಕಾ ಸ್ವಾತಂತ್ರಕ್ಕೆ ಕಡಿವಾಣ ಹಾಕಲು ಧರ್ಮಾಧಿಕಾರಿ (ಓಂಬುಡ್ಸ್ ಮನ್) ನೇಮಕ ಮಾಡಲು ನಿರ್ಧರಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ವಿಎಸ್ ಆಚಾರ್ಯ, ಇತ್ತೀಚೆಗೆ ದಿನಗಳಲ್ಲಿ ಮಾಧ್ಯಮಗಳು ಮುಖ್ಯವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳ ಅತಿರಂಜಿತ ವರದಿ ಮಾಡುತ್ತಿವೆ. ಇದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರತೊಡಗಿದೆ. ಮಂಗಳೂರು ಪಬ್ ದಾಳಿ ಹಾಗೂ ಕೇರಳ ಶಾಸಕರ ಪುತ್ರಿ ಅಪಹರಣ, ಹಿಂದೆ ನಡೆದ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯಾ ನಾಪತ್ತೆ ಪ್ರಕರಣದಲ್ಲೂ ಮಾಧ್ಯಮಗಳ ಅತಿಯಾಗಿ ವರದಿ ಮಾಡಿದ್ದರಿಂದ ಸಾಕಷ್ಟು ಸಮಸ್ಯೆ ಉಂಟಾಯಿತು. ಆದ್ದರಿಂದ ಧರ್ಮಾಧಿಕಾರಿ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಚಾರ್ಯ ವಿವರಿಸಿದರು. ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಾಧ್ಯಮಗಳ ಪ್ರಸಾರದ ಮೇಲೆ ಕಡಿವಾಣ ಅಗತ್ಯ ಎಂದು ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯವೂ ವ್ಯಕ್ತವಾಗಿದೆ ಎಂದು ಆಚಾರ್ಯ ಹೇಳಿದರು.
ಎಂ ಪಿ ಪ್ರಕಾಶ ತೀವ್ರ ವಿರೋಧ
ಗೃಹ ಸಚಿವ ವಿಎಸ್ ಆಚಾರ್ಯ ಹೇಳಿಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಉಪಮುಖ್ಯಮಂತ್ರಿ ಎಂಪಿ ಪ್ರಕಾಶ, ರಾಜ್ಯದಲ್ಲಿರುವ ಅಡಳಿತದಲ್ಲಿರುವ ಬಿಜೆಪಿ ಸರ್ಕಾರ ಫ್ಯಾಸಿಸ್ಟ್ ಸಂಸ್ಕೃತಿ ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ. ಪತ್ರಿಕಾ ಸ್ವಾತಂತ್ರ ಹರಣ ಮಾಡಲು ಮುಂದಾಗಿರುವ ಸರ್ಕಾರ ಕ್ರಮ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಆಡಳಿತದಲ್ಲಿರುವ ಸರ್ಕಾರದ ಮೇಲೆ ಟೀಕೆ-ಟಿಪ್ಪಣಿಗಳು ಬರುವುದು ಸಹಜ. ಅದನ್ನು ಸಹಿಸಕೊಳ್ಳಬೇಕಾಗಿರುವುದು ಸರ್ಕಾರದ ಮುಖ್ಯಸ್ಥರ ಕೆಲಸ. ಅದನ್ನು ಬಿಟ್ಟು ಮಾಧ್ಯಮಗಳ ಮೇಲೆ ಕಡಿವಾಣ ಹಾಕಲು ಮುಂದಾಗಿರುವುದು ಸಂಪೂರ್ಣ ಜನ ವಿರೋಧಿ ಕೆಲಸ. ಒಂದು ವೇಳೆ ಸರ್ಕಾರ ಧರ್ಮಾಧಿಕಾರಿ ನೇಮಕ ಮಾಡಲು ಮುಂದಾದಲ್ಲಿ ಮಾಧ್ಯಮದ ಪರವಾಗಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರಕಾಶ್ ಎಚ್ಚರಿಕೆ ನೀಡಿದರು.
ಹಿಟ್ಲರ್ ಸಂಸ್ಕತಿ, ಎಚ್ ಡಿಕೆ ಆರೋಪ
ಸಚಿವ ಆಚಾರ್ಯ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವ್ಯಾಖ್ಯಾನವೇ ಬೇರೆಯಾಗಿದೆ. ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಸ್ಥಿತಿ ಹೇರಿದಾಗಲೂ ಪತ್ರಿಕಾ ಸ್ವಾತಂತ್ರದ ಮೇಲೆ ಕಡಿವಾಣ ಹಾಕಿರಲಿಲ್ಲ ಎನ್ನುವ ಅವರು, ಕರ್ನಾಟಕದಲ್ಲಿ ಆಗುತ್ತಿರುವುದಾದರೂ ಏನು ಎಂದು ಪ್ರಶ್ನಿಸಿದ್ದಾರೆ. ಮಾಧ್ಯಮಗಳ ಸ್ವಾತಂತ್ರವನ್ನು ಹರಣ ಮಾಡುವುದು ಅಕ್ಷಮ್ಯ. ಇದೊಂದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು. ರಾಜ್ಯ ಸರ್ಕಾರ ಹಿಟ್ಲರ್ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಅವರು ಕೆಂಡಾಮಂಡಲವಾಗಿದ್ದಾರೆ. ಪತ್ರಿಕಾ ಸ್ವಾತಂತ್ರದ ಮೇಲೆ ನಿಗಾ ಹೇರಲು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications