ಪ್ರೇಮಿಗಳ ದಿನಾಚರಣೆ ಸಕಲ ಭದ್ರತೆ, ಶಂಕರ ಬಿದರಿ
ಬೆಂಗಳೂರು, ಫೆ. 9 : ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸುವ ವ್ಯಕ್ತಿ ಹಾಗೂ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಎಚ್ಚರಿಕೆ ನೀಡಿದ್ದಾರೆ.
ಪ್ರೇಮಿಗಳ ದಿನಾಚರಣೆ ಅಪರಾಧವಲ್ಲ. ಆದರೆ, ಕೆಲ ವ್ಯಕ್ತಿಗಳು ಹಾಗೂ ಸಂಘಟನೆಗಳು ಇದಕ್ಕೆ ಅಡ್ಡಿಪಡಿಸುವುದಾಗಿ ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಎ) ಅಡಿ ಇದು ಶಿಕ್ಷಾರ್ಹ ಅಪರಾಧ. ಎಚ್ಚರಿಕೆ ಮೀರುವವರಿಗೆ ಶಿಕ್ಷೆ ಕಾದಿರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಭಾರತ ಬಹು ಸಂಸ್ಕೃತಿಗಳ ರಾಷ್ಟ. ತಮಗಿಷ್ಟವಾದ ಭಾಷೆಯಲ್ಲಿ ಮಾತನಾಡುವುದು. ಹಬ್ಬ ಅಚರಿಸಿಕೊಳ್ಳುವುದು ಎಲ್ಲರಿಗೂ ಅವಕಾಶವಿದೆ. ಹೀಗಾಗಿ ಬಲ ಪ್ರಯೋಗಿಸಿ ಪ್ರೇಮಿಗಳ ದಿನಾಚರಣೆ ನಿಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಇದಕ್ಕೆ ಪ್ರತಿಕ್ರಿಯಿಸಿರುವ ಕರುನಾಡ ಸೇನೆ ಕುರಿತು ಎಲ್ಲರ ಹೇಳಿಕೆಯನ್ನೂ ಗಮನಿಸಿದ್ದೇವೆ. ಇದಕ್ಕೆ ಸೂಕ್ತ ಕಾಲದಲ್ಲಿ ಉತ್ತರ ನೀಡುತ್ತೇವೆ ಎಂದರು.
ಯಥಾಸ್ಥಿತಿ
ಫೆ 14 ರಂದು ಪಬ್, ಬಾರ್ ಹಾಗೂ ಹೋಟೆಲ್ ಗಳಿಗೆ ವಿಶೇಷ ಸಮಯ, ಮಿತಿ ವಿಧಿಸುವುದಿಲ್ಲ. ಕರ್ನಾಟಕ ಅಬಕಾರಿ ಕಾಯಿದೆ ಪ್ರಕಾರ ರಾತ್ರಿ 11.30ಕ್ಕೆ ಎಲ್ಲ ಪಬ್, ಹೋಟೆಲ್, ಬಾರ್ ಹಾಗೂ ರೆಸ್ಟೋರೆಂಟ್ ಗಳು ವ್ಯವಹಾರ ಸ್ಥಗಿತಗೊಳಿಸಬೇಕು. ಇದಕ್ಕೆ ತಪ್ಪಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಬಿದರಿ ಎಚ್ಚರಿಕೆ ನೀಡಿದರು.
ಪ್ರೇಮಿಗಳ ದಿನಾಚರಣೆ ಆಚರಿಸಿಕೊಳ್ಳುವವರಿಗೆ ಭದ್ರತೆ ನೀಡಲಾಗುವುದು. ರಾತ್ರಿ 11.30 ನಂತರ ಯಾವುದೇ ಆಚರಣೆಗೆ ಅವಕಾಶ ಇಲ್ಲ. ದುಷ್ಕರ್ಮಿಗಳು ದಾಂಧಲೆ ನಡೆಸಿದರೆ. ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅವಧಿ ಮೀರಿ ವಹಿವಾಟು ನಡೆಸುವ ರೆಸ್ಟೋರೆಂಟ್ ಹಾಗೂ ಬಾರ್ ಪರವಾನಿಗಿ ರದ್ದುಪಡಿಸಲಾಗುವುದು ಎಂದು ಹೇಳಿದರು.
ವ್ಯಾಲೆಂಟೈನ್ ಕಾರ್ಡ್ ಮಾರಾಟ ಮಾಡುವವರಿಗೆ ಬೆದರಿಕೆ ಹಾಕುವುದು. ಅಂಗಡಿಗೆ ನುಗ್ಗಿ ದಾಂಧಲೆ ನಡೆಸುವವರ ಮೇಲೂ ಕ್ರಮ ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ವಿಶೇಷ ಗಸ್ತು ತಂಡ ರಚಿಸಲಾಗಿದೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ
ಪ್ರೇಮಿಗಳ ದಿನಾಚರಣೆ ಆಚರಿಸಲಿ ಬಿಡಿ: ಎಲ್ಬಿ












Click it and Unblock the Notifications