ಮುಂದಿನ ಪ್ರಧಾನಿ ಮಹಿಳೆ, ಕೋಡಿಹಳ್ಳಿ ಸ್ವಾಮೀಜಿ
ಧಾರವಾಡ, ಫೆ. 6 : ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗುವುದು ಅನುಮಾನವಾಗಿದೆ. ಇಂತಹ ಸಂದರ್ಭದಲ್ಲಿ ಕೋಡಿಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯ ನಿಜವಾಗಿದ್ದೇ ಆದರೆ ಮುಂಬರುವ ಲೋಕಸಭೆ ಚುನಾವಣೆ ಬಳಿಕ ಮಹಿಳೆಯೊಬ್ಬರು ಪ್ರಧಾನಮಂತ್ರಿ ಪಟ್ಟವನ್ನು ಅಲಂಕರಿಸುವ ಸಾಧ್ಯತೆಗಳಿವೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಧಾರವಾಡಕ್ಕೆ ಆಗಮಿಸಿದ್ದ ಅವರು, ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜೊತೆ ಮಾತನಾಡಿದರು. ಲೋಕಸಭೆ ಚುನಾವಣೆಯಲ್ಲಿ ತೃತೀಯ ರಂಗ ಸಾಕಷ್ಟು ಉತ್ತಮ ಸಾಧನೆ ಮಾಡಲಿದ್ದು, ಮಹಿಳೆಯೊಬ್ಬರು ಪ್ರಧಾನಮಂತ್ರಿಯಾಗುವ ಸಾಧ್ಯತೆಗಳೇ ಹೆಚ್ಚು. ಆದರೆ ಅವರ ಅಧಿಕಾರದ ಅವಧಿ ಕಡಿಮೆ ಎಂದು ಹೇಳಿದ್ದಾರೆ.
ಪ್ರಮುಖ ಪಕ್ಷವೊಂದು ಅತ್ಯಧಿಕ ಸ್ಥಾನ ಗಳಿಸಿ ಪ್ರಧಾನಿ ಪಟ್ಟಕ್ಕೆ ಸಮೀಪ ಇರುತ್ತದಾದರೂ ಆ ಸಂದರ್ಭದಲ್ಲಿ ಪ್ರಧಾನಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಆಗುವ ಗಲಾಟೆಯಲ್ಲಿ ಒಂದು ಬಣ ಪಕ್ಷದಿಂದ ಸಿಡಿದು ಹೋಗಲಿದೆ ಎಂದರು. ಮುಂಬೈ ಭಯೋತ್ಪಾದನೆ ಕುರಿತು ತಾವು ಹಿಂದೆಯೇ ಭವಿಷ್ಯ ನುಡಿದಿದ್ದಾಗಿ ತಿಳಿಸಿದ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ತಮ್ಮನ್ನು ಭೇಟಿ ಮಾಡಿದಾಗ ಶೀಘ್ರದಲ್ಲೇ ಅಧಿಕಾರ ಕಳೆದುಕೊಳ್ಳಲಿದ್ದೀರಿ ಎಂದವರಿಗೆ ತಿಳಿಸಿದ್ದಾಗಿ ಹೇಳಿದರು.
ತೃತೀಯ ರಂಗದ ಪಕ್ಷಗಳಲ್ಲಿ ಮುಖ್ಯವಾಗಿ ಮಹಿಳಾ ನಾಯಕರೆಂದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ, ಎಡಪಕ್ಷಗಳ ನಾಯಕಿ ಬೃಂದಾ ಕಾರಟ್ ಆಗಿದ್ದಾರೆ. ಮಾಯಾವತಿ ಅವರನ್ನು ಪ್ರಧಾನಮಂತ್ರಿ ಹುದ್ದೆ ಅಭ್ಯರ್ಥಿ ಎಂದು ಸೂಚಿಸಲು ಎಡಪಕ್ಷಗಳು ಈ ಹಿಂದೆ ಹಿಂದೇಟು ಹಾಕಿದ್ದನ್ನು ಸ್ಮರಿಸಬಹುದು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications