ಪಬ್ ಸಂಸ್ಕೃತಿ ತಡೆಯಲು ನೀವ್ಯಾರ್ರಿ?
ನವದೆಹಲಿ, ಫೆ. 6: ಪ್ರೇಮಿಗಳ ದಿನ, ಪಬ್ ಸಂಸ್ಕ್ರತಿ ತಡೆಯಲು ಸರಕಾರ ಏನಾದರೂ ಶ್ರೀರಾಮ ಸೇನೆಗೆ ಗುತ್ತಿಗೆ ನೀಡಿದೆಯೇ, ಮಂಗಳೂರಿನಲ್ಲಿ ಪಬ್ ಮೇಲೆ ದಾಳಿ ನಡೆದ ಮೇಲೂ ಸರಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಕರ್ನಾಟಕದಲ್ಲಿ ಮಹಿಳೆಯರನ್ನು ರಕ್ಷಿಸಲು ಅಲ್ಲಿನ ಬಿಜೆಪಿ ಸರಕಾರ ವಿಫಲವಾಗಿದೆ ಎಂದು ಕೇಂದ್ರ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆ ರೇಣುಕಾ ಚೌಧುರಿ ಸರಕಾರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮ್ಮನ್ನು ತಾವೇ ಕಾನೂನು ರಕ್ಷಿಸುವ ಪೋಲೀಸರ ತರ ವರ್ತಿಸುತ್ತಿರುವ ಶ್ರೀರಾಮಸೇನೆಯ ಗೂಂಡಾಗಿರಿಯನ್ನು ಹತ್ತಿಕ್ಕಬೇಕಿದ್ದರೆ "ಪಬ್ ಭರೋ" ಆಂದೋಲನ ಹಮ್ಮಿಕೊಳ್ಳಬೇಕಾಗಿದೆ, ಇಂದಿನ ಪೀಳಿಗೆಯ ಯುವಕ, ಯುವತಿಯರಿಗೆ ಯಾವುದೇ ಉಡುಗೆ ತೊಡುವ ಸ್ವಾತಂತ್ರ್ಯ ಇದೆ. ಜೀನ್ಸ್ ತೊಡಬೇಡಿ ಎಂದು ಹೇಳಲು ಇವರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ. ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ನಿಲ್ಲದಿದ್ದರೆ ಕೇಂದ್ರವೇ ಮಧ್ಯ ಪ್ರವೇಶಿಸಬೇಕಾಗುತ್ತದೆ ಎಂದು ರೇಣುಕಾ ಗುಡುಗಿದ್ದಾರೆ.
ಪಬ್ ಗೆ ಹೋಗುವುದು, ಜೀನ್ಸ್ ತೊಡುವುದು, ಪ್ರೇಮಿಗಳ ದಿನ ಆಚರಿಸುವುದು ಯುವಕ ಯುವತಿಯರ ವಿವೇಚನೆಗೆ ಬಿಟ್ಟಿದ್ದು . ಇದನ್ನು ತಡೆಯಲು ಯಾರಾದರು ಪ್ರಯತ್ನಿಸಿದರೆ ಯುವಜನತೆ ಗುಂಪು ಗುಂಪಾಗಿ ಪಬ್ಗಳಿಗೆ ಹೋಗಬೇಕೆಂಬ ಸಲಹೆಯನ್ನೂ ನೀಡಿದ್ದಾರೆ. ವರನಟ ಡಾ. ರಾಜ್ ಅವರ ಜನಪ್ರಿಯ ಹಾಡು "ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ, ನಾವು ಕಾಲಕ್ಕೆ ತಕ್ಕಂತೆ ಕುಣಿಯಬೇಕು" ನೆನಪಿಸಿಕೊಳ್ಳೋಣವೇ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications