Get Updates
Get notified of breaking news, exclusive insights, and must-see stories!

ಯಡ್ಡಿಯಿಂದ ದುರ್ಗದಲ್ಲಿ ಮತ್ತದೇ ಭಾಷಣ

ಚಿತ್ರದುರ್ಗ, ಫೆ. 4 ( ತರಾಸು ವೇದಿಕೆ):ಒನಕೆ ಓಬವ್ವನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ 75 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಧೂರಿ ಸಮಾರಂಭದ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಆನಂತರ, ಡಿ ಎಸ್ ಕರ್ಕಿ ರಚಿತ ಹಚ್ಚೇವು ಕನ್ನಡ ದೀಪ ಒಲವೆತ್ತಿ ತೋರುವ ದೀಪ ನಾಡಗೀತೆಯನ್ನು ಹಾಡುವ ಮೂಲಕ ಅದ್ಧೂರಿ ಕನ್ನಡ ಡಿಂಡಿಂಮಕ್ಕೆ ಮುನ್ನುಡಿ ಬರೆಯಲಾಯಿತು.

ಉದ್ಘಾಟನೆಗೂ ಮೊದಲು ಬುಧವಾರ ಬೆಳಗ್ಗೆ ನಗರದ ಹೊಳಲ್ಕರೆ ರಸ್ತೆಯ ಕನಕ ವೃತ್ತದಿಂದ ತರಾಸು ಮಂಟಪದವರೆಗೆ ಸಮ್ಮೇಳನಾಧ್ಯಕ್ಷ ಎಲ್ ಬಸವರಾಜು ಅವರನ್ನು ದುರ್ಗದ ರಾಜಬೀದಿಗಳಲ್ಲಿ ಆಕರ್ಷಕ ಮೆರವಣಿಗೆ ಮೂಲಕ ಕರೆತರಲಾಯಿತು. ಪೂರ್ಣ ಕುಂಭ ಹೊತ್ತ ಮಹಿಳೆಯರು, 75 ವಿವಿಧ ಪ್ರಕಾರಗಳ ಕಲಾ ತಂಡಗಳು ಜೊತೆಗೆ ಮಂಗಳವಾದ್ಯಗಳ ಮೂಲಕ ಅದ್ಧೂರಿಯಾಗಿ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು.

ನಾಲ್ಕು ದಿನಗಳ ಐತಿಹಾಸಿಕ ಅಕ್ಷರ ಜಾತ್ರೆಯ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿ ಸಮ್ಮೇಳನವನ್ನುದ್ದೇಶಿಸಿ ಉದ್ಘಾಟನಾ ಭಾಷಣ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಮಂತ್ರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಜೆಟ್ ಅನುದಾನವನ್ನು 50 ಕೋಟಿ ರೂ.ಗಳಿಂದ 100 ಕೋಟಿ ರೂ. ದಾಟಿಸಿದ ತೃಪ್ತಿ ನನ್ನದು. ಮುಖ್ಯಮಂತ್ರಿಯಾಗಿ ನನ್ನ ಮೊದಲ ಬಜೆಟ್‌ನಲ್ಲಿ ಈ ವರ್ಷ ಅಂದರೆ 2008-09ನೇ ಸಾಲಿನಲ್ಲಿ 184 ಕೋಟಿ ರೂ.ಗಳ ಅನುದಾನವನ್ನು ಈ ಇಲಾಖೆಗೆ ಹಂಚಿಕೆ ಮಾಡಿರುವುದು ಹೆಮ್ಮಯ ಸಂಗತಿ ಎಂದರು.

ಕನ್ನಡದ ಕೆಲಸ ಮತ್ತು ಕನ್ನಡಿಗರ ಹಿತ ಕಾಪಾಡುವ ವಿಚಾರದಲ್ಲಿ ಯಾವುದೇ ಕೊರತೆಯಾಗದಂತೆ ಹಿಂದೆಯೂ ನೋಡಿಕೊಂಡಿದ್ದೇವೆ. ಮುಂದೆಯೂ ನೋಡಿಕೊಳ್ಳುತ್ತೇವೆ ಎಂಬ ಭರವಸೆಯನ್ನು ಈ ಸಂದರ್ಭದಲ್ಲಿ ತಮ್ಮೆಲ್ಲರ ಮೂಲಕ ನಾಡಿನ ಐದೂವರೆ ಕೋಟಿ ಜನರಿಗೆ ನೀಡಬಯಸುತ್ತೇನೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ಮರೀಚಿಕೆಯಾಗಿದ್ದ ಸಂದರ್ಭದಲ್ಲಿ ತಮ್ಮೆಲ್ಲರ ಸಹಕಾರ, ಹಾರೈಕೆ, ಕನ್ನಡ ಪರ ಸಂಘ ಸಂಸ್ಥೆಗಳ ಹೋರಾಟ ಮತ್ತು ಸರ್ಕಾರದ ದಿಟ್ಟ ನಿಲುವಿನಿಂದಾಗಿ ಆ ಗೌರವ ಕನ್ನಡಕ್ಕೆ ದೊರೆತಿದೆ. ಆದರೆ ಸಂಕುಚಿತ ಮನಸ್ಸಿನ ನೆರೆಯ ನಾಡಿನ ವಕೀಲರೊಬ್ಬರ ತಗಾದೆಯಿಂದಾಗಿ ಅನಿಶ್ಚಿತತೆ ಇನ್ನೂ ಇದೆ. ಕನ್ನಡಕ್ಕೆ ಸಂದಿರುವ ಶಾಸ್ತ್ರೀಯ ಭಾಷಾ ಸ್ಥಾನವನ್ನು ಕಾಪಾಡಿಕೊಳ್ಳಲು ಕಾನೂನು ಸ್ವರೂಪದ ಹೋರಾಟವಿರಬಹುದು ಅಥವಾ ಇನ್ನಾವುದೇ ರೀತಿಯ ಹೋರಾಟದ ಅಗತ್ಯಬಿದ್ದರೂ ನಮ್ಮ ಸರ್ಕಾರ ಸಿದ್ಧ ಮತ್ತು ಆ ಗೌರವವನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತ ಸಂದರ್ಭದಲ್ಲಿ ಬಜೆಟ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒದಗಿಸಿದ್ದ ಅನುದಾನದ ಜೊತೆಗೆ ಹೆಚ್ಚುವರಿಯಾಗಿ 25 ಕೋಟಿ ರೂ. ವೆಚ್ಚದ ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ ಎಂದರು. ಹೊರನಾಡಿನ ಮತ್ತು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಪೀಠಗಳ ಸ್ಥಾಪನೆ, ನಾಡಿನ ವಿವಿಧ ವಿಶ್ವವಿದ್ಯಾಲಯಗಳಲ್ಲಿನ ಕನ್ನಡ ಪೀಠಗಳ ಬಲವರ್ಧನೆ, ಐಎಎಸ್, ಐಪಿಎಸ್ ಮೊದಲಾದ ಅಖಿಲ ಭಾರತ ಮಟ್ಟದ ಪರೀಕ್ಷೆಗಳನ್ನು ಕನ್ನಡದಲ್ಲಿ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದು, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಕನ್ನಡ ಕೋರ್ಸ್ ಪ್ರಾರಂಭ ಇತ್ಯಾದಿ ಯೋಜನೆಗಳಿಗೆ ಈ ಹಣವನ್ನು ವೆಚ್ಚ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿಗೆ ತಲಾ 2 ಕೋಟಿ ರೂ.ಗಳಂತೆ 18 ಕೋಟಿ ರೂ.ಗಳ ಅನುದಾನ ಒದಗಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಹಾಗೆಯೇ ರಾಜ್ಯ ಮತ್ತು ಹೊರದೇಶಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪಿಸಲು ತಲಾ 1 ಕೋಟಿ ರೂ.ನಂತೆ 5 ಕೋಟಿ ರೂ.ಗಳನ್ನು ಒದಗಿಸಲು ನಾವು ನಿರ್ಧರಿಸಿದ್ದೇವೆ ಎಂದು ಯಡಿಯೂರಪ್ಪ ವಿವರಿಸಿದರು.ಕನ್ನಡ ತಂತ್ರಾಂಶ ಅಭಿವೃದ್ಧಿಗೆ 2 ಕೋಟಿ, ಕನ್ನಡದಲ್ಲಿ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಪರೀಕ್ಷೆ ತೇರ್ಗಡೆಯಾದವರಿಗೆ 1 ಲಕ್ಷ ರೂ. ನಗದು ಬಹುಮಾನ ಹಾಗೂ ಕೇಂದ್ರದ ಇತರ ನಾಗರೀಕ ಸೇವೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಲಾ 50 ಸಾವಿರ ರೂ.ಗಳ ನಗದು ಬಹುಮಾನವನ್ನು ನಮ್ಮ ಸರ್ಕಾರ ನೀಡಲಿದೆ.

ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ನಾಡಿನ ಜ್ವಲಂತ ಸಮಸ್ಯೆಗಳನ್ನು ಚರ್ಚಿಸುತ್ತಿರುವುದು ಮತ್ತು ಆ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಸಂಗತಿ. ಆದರೆ ಈ ನಿರ್ಣಯಗಳ ಜಾರಿಯಲ್ಲಿ ಬಹುದೊಡ್ಡ ಕೊರತೆಯಿದೆ. ಈ ಕೊರತೆಯನ್ನು ನಿವಾರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಆದಷ್ಟೂ ಅನುಷ್ಠಾನಯೋಗ್ಯವಾದ ನಿರ್ಣಯಗಳನ್ನು ಕೈಗೊಳ್ಳುವುದಲ್ಲದೇ ಅವುಗಳ ಅನುಷ್ಠಾನಕ್ಕೆ ಪೂರಕವಾದ ವಿಧಿವಿಧಾನಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿದರೆ ಅವುಗಳನ್ನು ಕಾರ್ಯಗತಗೊಳಿಸಲು ನಮ್ಮ ಸರ್ಕಾರ ಶ್ರಮಿಸಲಿದೆ ಎಂದು ಈ ಸಂದರ್ಭದಲ್ಲಿ ಹೇಳಲಿಚ್ಚಿಸುತ್ತೇನೆ.

ಸಿರಿಗೆರೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಚಿತ್ರದುರ್ಗದ ಬೃಹನ್ಮಠದ ಶಿವಯೋಗಿ ಮುರುಘರಾಜೇಂದ್ರ ಶರಣರು, ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ, ಕಸಾಪ ಅಧ್ಯಕ್ಷ ಡಾ ನಲ್ಲೂರು ಪ್ರಸಾದ್, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಕರುಣಾಕರರೆಡ್ಡಿ, ಸಚಿವರಾದ ಗೂಳಿಹಟ್ಟಿ ಶೇಖರ್, ಡಿ ಸುಧಾಕರ್, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಸಾಹಿತಿ ಸಿದ್ದಲಿಂಗಯ್ಯ, ಎಸ್ ಎಲ್ ಶೇಷಗಿರಿರಾವ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ

ಸಮ್ಮೇಳನಾಧ್ಯಕ್ಷರ ಭಾಷಣದ ಪೂರ್ಣಪಾಠ
ಚಿತ್ರದುರ್ಗದ ದಿಗ್ಗಜರ ನಾಮ ಸ್ಮರಣೆ
ವಚನ ಸಾಹಿತ್ಯದ ವಕ್ತಾರ ಎಲ್ ಬಸವರಾಜು
ದುರ್ಗದ ಚಿತ್ರಗಳನ್ನು ಕಣ್ತುಂಬಿಕೊಳ್ಳಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+