ಪ್ರೇಮಿಗಳ ದಿನಾಚರಣೆಗೆ ಶ್ರೀರಾಮಸೇನೆ ವಿರೋಧ
ಮಡಿಕೇರಿ, ಫೆ.2: ನಮ್ಮ ಜಾತಿ, ಭಾಷೆ , ಸಂಸ್ಕೃತಿಯ ರಕ್ಷಣೆ ಆಗಬೇಕಿದೆ. ಯುವ ಪೀಳಿಗೆಗಳಿಗೆ ಇದರ ಅರಿವು ಮೂಡಿಸಬೇಕಾಗಿದೆ, ಆದುದರಿಂದ ಫೆಬ್ರವರಿ 14ರ "ಪ್ರೇಮಿಗಳ ದಿನ " ಆಚರಣೆಗೆ ನಮ್ಮ ವಿರೋಧವಿದೆ. ಪ್ರೇಮಿಗಳ ದಿನವನ್ನು ಆಚರಿಸಲು ನಾವು ಬಿಡುವುದಿಲ್ಲ. ಒಂದು ವೇಳೆ ಆಚರಿಸಲು ಮುಂದಾದರೆ ನಮ್ಮ ಸಂಘಟನೆಯ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್ ಎಚ್ಚರಿಸಿದ್ದಾರೆ.
ಪ್ರಸ್ತುತ ಮಡಿಕೇರಿ ಪೊಲೀಸರ ವಶದಲ್ಲಿರುವ ಮುತಾಲಿಕ್, ದೈನಿಕ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ. ಗೋಣಿ ಕೊಪ್ಪಲಿನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮಡಿಕೇರಿ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಹಿಂದು ಧರ್ಮ ರಕ್ಷಣೆಗೆ ಫಣತೊಟ್ಟಿರುವ ನಮ್ಮನ್ನ್ನು ಬಂಧಿಸುವ ಕಾರ್ಯಕ್ಕೆ ಬಿಜೆಪಿ ಸರ್ಕಾರ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪಬ್ ದಾಳಿಯನ್ನು ಸಮರ್ಥಿಸಿದ ಮುತಾಲಿಕ್, ರಾಜ್ಯದಲ್ಲಿ ಪಬ್ ಸಂಸ್ಕ್ರತಿಯನ್ನು ಮುಂದುವರಿಸಲು ನಾವು ಬಿಡುವುದಿಲ್ಲ. ನಮ್ಮ ಹೋರಾಟ ಮುಂದುವರಿಯುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಪಬ್ ಮುಚ್ಚಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿರುವ ಮುಖ್ಯಮಂತ್ರಿಯವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದರು. ಹಿಂದುತ್ವದ ಮೂಲಕ ಗದ್ದುಗೆ ಏರಿರುವ ಬೆಜೆಪಿ , ಹಿಂದುತ್ವದ ರಕ್ಷಣೆಗೆ ಹೊರಟ ನಮ್ಮನ್ನೇ ಬಂಧಿಸುವ ಕಾರ್ಯಕ್ಕೆ ಮುಂದಾಗಿರುವುದು ವಿಪರ್ಯಾಸ ಎಂದು ವಿಷಾದ ವ್ಯಕ್ತ ಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಗಡ್ಡಧಾರಿ ಮಹಿಳೆಯರಿಂದ ಸಂಸ್ಕೃತಿ ನಾಶ ಇಲ್ಲ












Click it and Unblock the Notifications