ಆಗುಂಬೆ:ನಕ್ಸಲರ ದಾಳಿ, ಜಮೀನ್ದಾರ ಮನೆಗೆ ಬೆಂಕಿ
ಶಿವಮೊಗ್ಗ, ಫೆ.2: ಆಗುಂಬೆಯಿಂದ 20 ಕಿ.ಮೀ ದೂರದ ಬಿದರಗೋಡು ಸಮೀಪದ ಜಮೀನ್ದಾರರ ಮನೆಯೊಂದರ ಮೇಲೆ ಭಾನುವಾರಮಧ್ಯರಾತ್ರಿ ಎರಡು ಮಹಿಳೆಯರೂ ಸೇರಿದಂತೆ 9 ಜನರಿದ್ದ ನಕ್ಸಲರ ತಂಡವೊಂದು ದಾಳಿ ನಡೆಸಿದೆ. ಅರುಣ್ ದಂಪತಿಗಳನ್ನು ಕೂಡಿಹಾಕಿ ಮನೆ ಮತ್ತು ಮೋಟರ್ ಬೈಕಿಗೆ ಬೆಂಕಿ ಹಚ್ಚಿ , ಸುಮಾರು 7 ಲಕ್ಷ ರುಪಾಯಿ ಬೆಲೆಬಾಳುವ ನಗ ನಾಣ್ಯ ಗಳನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.
ದಾಳಿ ನಡೆದ ಮನೆಯಿಂದ ಸಮೀಪದ ಪೋಲಿಸ್ ಠಾಣೆ ಕೂಗಳತೆಯ ದೂರದಲ್ಲಿದ್ದರೂ, ಕೆಲವು ಘಂಟೆಗಳ ನಂತರ ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದರಿಂದ ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಲು ದರೋಡೆಕೋರರು ನಡೆಸಿದ ಕೃತ್ಯವೇ ಅಥವಾ ಈ ದಾಳಿಯಲ್ಲಿ ನಕ್ಸಲರ ಕೈವಾಡವಿದೆಯೇ ಎಂದು ಪೋಲಿಸ್ ಇಲಾಖೆ ದೃಢಪಡಿಸಿಲ್ಲ.
--
ಆಗುಂಬೆಯಲ್ಲಿ ನಕ್ಸಲರು ಪ್ರತ್ಯಕ್ಷರಾದ ಸುದ್ದಿ ತಿಳಿಯುತ್ತಿದ್ದಂತೆ ಮಲೆನಾಡಿನಲ್ಲಿ ಕೂಂಬಿಂಗ್ ತೀವ್ರಗೊಳಿಸಲಾಗಿದೆ. ಆಗುಂಬೆ ಸುತ್ತಮುತ್ತ ಈಗಾಗಾಲೇ ಪೊಲೀಸರ ಶೋಧಕಾರ್ಯ ಮುಂದುವರಿದಿದೆ. ನಕ್ಸಲ್ ನಿಗ್ರಹ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಚಿಕ್ಕಮಗಳೂರು, ಉಡುಪಿ, ಕಾರವಾರ, ದಾವಣಗೆರೆ ಸೇರಿದಂತೆ ನೆರೆಯ ಜಿಲ್ಲೆಗಳ ಪೊಲೀಸರಿಗೂ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications