ಸಿದ್ದಗಂಗಾ ಶ್ರೀ 102 ನೇ ಜನ್ಮದಿನೋತ್ಸವ
ಬೆಂಗಳೂರು, ಜ. 28: "ನಡೆದಾಡುವ ದೇವರು" ತುಮಕೂರು ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ 102ನೇ ಜನ್ಮದಿನದ ಕಾರ್ಯಕ್ರಮವನ್ನು ಫೆಬ್ರವರಿ 2ನೇ ತಾರೀಕಿನಿಂದ ತುಮಕೂರಿನಲ್ಲಿ ವಿಜೃಂಭಣೆಯಿಂದ ಆಚರಿಸಲು ಕಾರ್ಯಕ್ರಮದ ಆಯೋಜನಾ ಸಮಿತಿ ನಿರ್ಧರಿಸಿದೆ. ಸಮಿತಿ ಅಧ್ಯಕ್ಷ, ಶಾಸಕ ವಿ ಸೋಮಣ್ಣ ಈ ವಿಷಯ ತಿಳಿಸಿದರು.
ಮೂರುದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಸುಮಾರು 10 ಲಕ್ಷ ಜನ ಭಾಗವಹಿಸುವ ಅಂದಾಜು ಇದೆ. ಸಿದ್ಧಶೈಲ ಮತ್ತು ಚಿತ್ರ ಜಂಗಮ ಸೇರಿದಂತೆ 111 ಪುಸ್ತಕಗಳನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಸೋಮಣ್ಣ ತಿಳಿಸಿದರು. ಸಿದ್ದಗಂಗಾ ಮಠದಲ್ಲೇ ವಿದ್ಯಾಭ್ಯಾಸ ನಡೆಸಿದ ಕವಿ ಜಿ ಎಸ್ ಶಿವರುದ್ರಪ್ಪ ಅವರಿಗೆ "ಸಿದ್ದಗಂಗಾ ಶ್ರೀ" ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ಫೆಬ್ರವರಿ 2ನೇ ತಾರೀಕಿನಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ರಾಮೇಶ್ವರ ಠಾಕೂರ್, ಸುತ್ತೂರು ಮಠದ ಸ್ವಾಮೀಜಿ ಮುಂತಾದವರು ಅಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸೋಮಣ್ಣ ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಧುರೀಣ ಎಲ್ ಕೆ ಅಡ್ವಾಣಿ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹಲವು ರಾಜಕೀಯ ನಾಯಕರುಗಳು ಅಲ್ಲದೆ ಶ್ರೀಮಠದ ಭಕ್ತಾದಿಗಳು ಭಾಗವಹಿಸಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications