ಹೈಕಮಾಂಡ್ ನಿಂದ ಬುಲಾವ್, ಸಿದ್ದು ದಿಲ್ಲಿಗೆ
ಬೆಂಗಳೂರು, ಜ. 28 : ಹೆಚ್ಚು ಕಡಿಮೆ ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ವನವಾಸ ಅನುಭವಿಸುತ್ತಿರುವ ಸಿದ್ದರಾಮಯ್ಯ ಅವರ ಸಂಕಷ್ಟದ ದಿನಗಳು ಅಂತ್ಯ ಕಾಣುವ ಸಮಯ ಬಂದಿದೆ. ಇನ್ನೇನೂ ಪಕ್ಷ ಬಿಡುವ ಹಂತ ತಲುಪಿದ್ದ ಸಿದ್ದುಗೆ, ಮಂಗಳವಾರ ಸಂಜೆ ದೆಹಲಿಯ ಜನಪತ್ ರಸ್ತೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿಂದ ದೂರವಾಣಿ ಕರೆ ಬಂದಿದೆ. ದೆಹಲಿಗೆ ಆಗಮಿಸಿ ಚರ್ಚಿಸುವಂತೆ ಮೇಡಂ ಸೋನಿಯಾ ಗಾಂಧಿ ಬುಲಾವ್ ನೀಡಿದ್ದಾರೆ.
ಸಿದ್ದರಾಮಯ್ಯ ನೂತನ ಪಕ್ಷ ಸ್ಥಾಪನೆ ಮಾಡಲಿದ್ದಾರೆ. ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. ಪ್ರಜಾರಾಜ್ಯಂ ಮುಖ್ಯಸ್ಥರಾಗಲಿದ್ದಾರೆ. ಇಲ್ಲವೆ ಮರಳಿ ದೇವೇಗೌಡರಿಗೆ ಜೈ ಅನ್ನುತ್ತಾರೆ ಹೀಗೆ ಅನೇಕ ಸುದ್ದಿಗಳು ಮಾಧ್ಯಮಗಳಲ್ಲಿ ಅಂಗ್ರ ಪಂಕ್ತಿಯಲ್ಲಿ ಪ್ರಕಟವಾಗಿರುವುದು ಸುಳ್ಳಲ್ಲ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸಿದ್ದು ಅವರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿರುವುದಕ್ಕೆ ಭಾರಿ ಮಹತ್ವ ಬಂದಿದೆ.
ಅಲ್ಲದೇ ಸಿದ್ದರಾಮಯ್ಯ ಮಂಗಳವಾರ ಹುಬ್ಬಳ್ಳಿ ಮಾಧ್ಯಮದೊಂದಿಗೆ ಮಾತನಾಡಿ, ನಾನು ಮುಖ್ಯಮಂತ್ರಿ ಅಭ್ಯರ್ಥಿ, ಕಾಂಗ್ರೆಸ್ ನಲ್ಲಿಯೇ ಇರುವೆ ಎನ್ನುವ ಹೇಳಿಕೆ ನೀಡಿದ್ದರು. ಸಿದ್ದು ಹೇಳಿಕೆ ಮೂಲ ಕಾಂಗ್ರೆಸ್ಸಿಗರಿಗೆ ಅಸಮಾಧಾನ ಆಗಿರುವದಂತೂ ಯಾರೂ ತಳ್ಳಿಹಾಕುವಂತಿಲ್ಲ.
ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಬಿಜೆಪಿ ಶಾಸಕರೊಂದಿಗೆ ಆತ್ಮೀಯತೆಯಿಂದ ಇರುವುದು ಕಾಂಗ್ರೆಸ್ ನಾಯಕರ ಕಣ್ಣು ಕೆಂಪಗಾಗಿತ್ತು. ಹಾವೇರಿಯ ಕಾಗಿನೆಲೆಯಲ್ಲಿ ನಡೆದ ಸಮಾವೇಶದಲ್ಲಿ ಸಿದ್ದು, ಯಡಿಯೂರಪ್ಪ ಒಂದೇ ವೇದಿಕೆ ಹಂಚಿಕೊಂಡಿದ್ದು, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಕಾಗಿನೆಲೆಗೆ ಹಣ ನೀಡಿರುವುದರ ಕುರಿತು ಯಡಿಯೂರಪ್ಪ ಕ್ರಮವನ್ನು ಸಿದ್ದು ಮನಸಾರೆ ಹೊಗಳಿದ್ದು, ಸಿದ್ದು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ ಎನ್ನುವ ಗುಸುಗುಸು ಹಬ್ಬಿತ್ತು. ಈ ಎಲ್ಲ ಉಹಾಪೋಹಗಳ ನಡುವೆ ಇಂದು ಸೋನಿಯಾ ಗಾಂಧಿಯವರನ್ನು ಸಿದ್ದು ಬೇಟಿ ಚರ್ಚಿಸಿದ್ದಾರೆ. ಈ ಹಿಂದೆಯೂ ದೆಹಲಿಗೆ ಕರೆಸಿಕೊಂಡ ಹೈಕಮಾಂಡ್ ಬರೀ ಭರವಸೆ ನೀಡಿ ಹಿಂದಕ್ಕೆ ಕಳಿಸಿತ್ತು.
(ದಟ್ಸ್ ಕನ್ನಡ ವಾರ್ತೆ)
ಮುಖ್ಯಮಂತ್ರಿ ಅಭ್ಯರ್ಥಿ ನಾನೇ: ಸಿದ್ದ್ದು












Click it and Unblock the Notifications