ಚಿತ್ರದುರ್ಗ,ಸಾಹಿತ್ಯ ಸಮ್ಮೇಳನ ಫೆ.4ಕ್ಕೆ ಮುಂದೂಡಿಕೆ
ಚಿತ್ರದುರ್ಗ, ಜ. 28 : ಅಭಿಲ ಭಾರತ 75ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ. 4ಕ್ಕೆ ಮುಂದೂಡಲಾಗಿದೆ. ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರ ನಿಧನದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜನವರಿ 29 ರಿಂದ ಫೆಬ್ರವರಿ 1ರವರೆಗೆ ಸಾಹಿತ್ಯ ಸಮ್ಮೇಳನ ನಡೆಯಬೇಕಿತ್ತು. ಇದಕ್ಕಾಗಿ ಎಲ್ಲ ಸಿದ್ಧತೆಗಳು ಮುಗಿದಿದ್ದವು. ಆದರೆ, ಮಾಜಿ ರಾಷ್ಟ್ರಪತಿ ವೆಂಕಟರಾಮನ್ ಅವರ ನಿಧನದ ಹಿನ್ನೆಲೆಯಲ್ಲಿ ಸರ್ಕಾರ ಏಳು ದಿನಗಳ ಕಾಲ ಶೋಕಾಚರಣೆ ಘೋಷಿಸಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೀಗ ಸಮ್ಮೇಳನ ಫೆ .4, 5, 6 ಮತ್ತು 7 ರಂದು ನಡೆಯಲಿದೆ. ಗೋಷ್ಠಿ ಮತ್ತಿತರ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಆರ್ .ಕೆ. ನಲ್ಲೂರು ಪ್ರಸಾದ್ ತಿಳಿಸಿದ್ದಾರೆ.
ಬೀದರ್ ಉತ್ಸವ ಮುಂದಕ್ಕೆ: ಮಂಗಳವಾರ(ಜ.27) ಆರಂಭಗೊಂಡ ಬೀದರ್ ಉತ್ಸವವನ್ನೂ ಮುಂದೂಡಲಾಗಿದೆ. ಇಲ್ಲಿನ ಕೋಟೆ ಆವರಣದಲ್ಲಿ ಉತ್ಸವ ಅದ್ದೂರಿಯಾಗಿ ಆರಂಭವಾಗಿತ್ತು. ಉದ್ಘಾಟನಾ ಸಮಾರಂಭ ಮುಗಿಯುತ್ತಲೇ ಉತ್ಸವ ಮುಂದೂಡಿಕೆ ಘೋಷಿಸಲಾಯಿತು. ಸಾಂಸ್ಕೃತಿಕ ವೈಭವದ ಸವಿಯಲ್ಲಿ ಸೇರಿದ್ದ ಅಪಾರ ಜನಸ್ತೋಮ ನಿರಾಶೆಯಿಂದ ವಾಪಸಾದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications