ಪಬ್ ದಾಳಿ ಶ್ರೀರಾಮ ಸೇನೆ ಸಂಚಾಲಕ ಬಂಧನ
ಮಂಗಳೂರು ಜ 27 : ಮಂಗಳೂರು ಪಬ್ ಮೇಲಿನ ದಾಳಿ ಸಂಬಂಧ ಶ್ರೀರಾಮ ಸೇನೆಯ ಸಹಸಂಚಾಲಕ ಪ್ರಸಾದ್ ಅತ್ತವಾರ್, ಜಿಲ್ಲಾ ಸಂಚಾಲಕ ಸುಭಾಶ್ ಪಡೀಲ್, ಜಿಲ್ಲ ಉಪ ಸಂಚಾಲಕ ಕಿಶೋರ್, ನಗರ ಸಂಚಾಲಕ ಗಣೇಶ್ ಹಾಗು 25 ಮಂದಿ ಸಂಘದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಯುವಕ ಯವತಿಯರು ಕುಡಿದು, ಅರೆಬೆತ್ತಲೆ ನರ್ತನದಲ್ಲಿ ತೊಡಗಿದ್ದಾಗ ಶ್ರೀರಾಮ ಸೇನೆ ಕಾರ್ಯಕರ್ತರು ಪಬ್ ಮೇಲೆ ದಾಳಿ ನಡೆಸಿದ್ದರು.
ರಾಷ್ಟ್ರಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಸರಕಾರ, ಸೇನೆಯ ಪ್ರಮುಖ ನಾಯಕರನ್ನು ನಿನ್ನೆ ತಡರಾತ್ರಿ ಬಂಧಿಸಿದೆ. ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಈ ಘಟನೆಯನ್ನು ಮಾದ್ಯಮಗಳ ಮುಂದೆ ಸಮರ್ಥಿಸಿಕೊಂಡಿದ್ದರು. ದಾಳಿಯಲ್ಲಿ ಶಾಮೀಲಾದವರ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಬಂಧಿತರ ವಿರುದ್ಧ ಗೂಂಡಾ ಕಾಯ್ದೆ ಬಳಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿಯೂ ರಾಜ್ಯ ಗೃಹ ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
ಈ ಮಧ್ಯೆ ಪಬ್ ಮೇಲೆ ಯುವತಿಯರ ಮೇಲಿನ ಹಲ್ಲೆ ಖಂಡಿಸಿ ಮಂಗಳೂರಿನ ಕಾಲೇಜುಗಳು ಮಂಗಳವಾರ ಬಂದ್ಗೆ ಕರೆ ನೀಡಿದ್ದರೆ, ಇತ್ತ ಶ್ರೀರಾಮ ಸೇನೆಯ ಕಾರ್ಯಕರ್ತರ ಬಂಧನ ವಿರೋಧಿಸಿ ರಾಜ್ಯಸಾರಿಗೆ ಸಂಸ್ಥೆಯ ನಾಲ್ಕು ಬಸ್ಸುಗಳು ಮತ್ತು ಲಾರಿಯೊಂದಕ್ಕೆ ದುರ್ಷ್ಕರ್ಮಿಗಳು ಕಲ್ಲು ತೂರಿ ಬೆಂಕಿ ಹಚ್ಚುವ ಪ್ರಯತ್ನ ವರದಿಯಾಗಿದೆ.
(ದಟ್ಸ್
ಕನ್ನಡ
ವಾರ್ತೆ)