ಮಂಗಳೂರು ಘಟನೆ ಕ್ರೂರ: ಸಚಿವೆ ರೇಣುಕಾ
ನವದೆಹಲಿ, ಜ. 26 : ಮಂಗಳೂರಿನ ಪಬ್ ವೊಂದರಲ್ಲಿ ಯುವಕ-ಯವತಿಯರ ಮೇಲೆ ಹಲ್ಲೆ ಮಾಡಿರುವ ಹಿಂದೂ ಸಂಘಟನೆಯ ಕಾರ್ಯಕರ್ತರ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ರೇಣುಕಾ ಚೌಧರಿ ಇದೊಂದು ಕ್ರೂರ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತವನ್ನು ತಾಲೀಬಾನೀಕರಣಗೊಳಿಸುವ ಹುನ್ನಾರ ಇದಾಗಿದ್ದು, ಈ ಸಂಬಂಧ ಕರ್ನಾಟಕ ಸರ್ಕಾರ ಮತ್ತು ದಾಳಿ ನಡೆಸಿದ ಶ್ರೀರಾಮಸೇನೆ ಸಂಘಟನೆಯಿಂದ ವಿವರಣೆ ಕೋರಿರುವುದಾಗಿಯೂ ಅವರು ಸುದ್ದಿಗಾರರಿಗೆ ತಿಳಿಸಿದರು. ತಪ್ಪಿತಸ್ಥ ದಾಳಿಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ. ಬಿಜೆಪಿ ನಾಯಕರು ಈ ಘಟನೆಯನ್ನು ಖಂಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ದಾಳಿಯನ್ನು ವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಹಲವಾರು ಮಹಿಳಾ ಹಕ್ಕುಗಳ ಕಾರ್ಯಕರ್ತೆಯರು ಖಂಡಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಮೀನಾಕ್ಷಿ ಲೇಖಿ, ಮಹಿಳಾ ಒಕ್ಕೂಟದ ಪ್ರದಾಮ ಕಾರ್ಯದರ್ಶಿ ಅನ್ನೀ ರಾಜಾ, ಸುಪ್ರಿಂಕೋರ್ಟ್ ಮಹಿಳಾ ವಕೀಲೆ ಕಾಮಿನಿ ಜೈಸ್ವಾಲ್ ಸೇರಿದಂತೆ ಹಲವಾರು ಮಹಿಳೆಯರು ಕಚೇರಿ, ಪಬ್ ಸೇರಿದಂತೆ ತಾವು ಬಯಸಿದಲ್ಲಿಗೆ ಹೋಗಲು ಸ್ವಾತಂತ್ರರು ಎಂದು ಪ್ರತಿಕ್ರಿಯಿಸಿದ್ದಾರೆ. ಈ ದಾಳಿಯನ್ನು ಶ್ರೀರಾಮಸೇನೆ ಮತ್ತಿತರ ಹಿಂದೂಪರ ಸಂಘಟನೆಗಳು ಸಮರ್ಥಿಸಿಕೊಂಡಿವೆ.
18 ಮಂದಿ ಸೆರೆ
ಮಂಗಳೂರು ನಗರದ ಅಮ್ನೇಶಿಯಾ ದಿಲಂಜ್ ಎಂಬ ಪಬ್ ಮೇಲೆ ನಡೆಸಿ, ದಾಂಧಲೆ ಎಸಗಿದ ಆರೋಪದಲ್ಲಿ ಶ್ರೀರಾಮಸೇನೆಯ ಸಹಸಂಚಾಲಕ ಸೇರಿ ಹದಿಮೂರು ಮಂದಿಯನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದಾರೆ. ಸೇನೆಯ ಸಹಸಂಚಾಲಕ ಸುಭಾಷ್ ಪಡೀಲ್, ಶರತ್ ಪದವಿನಂಗಡಿ, ದಿನೇಶ್, ಹರೀಶ್, ಕೀರ್ತನರಾಜ್ ಶೆಟ್ಟಿ, ರಾಘವೇಂದ್ರ ಪೈ, ಜೀವನ್, ವಿನೋದ್ ಮತ್ತು ಪ್ರೀತೇಶ್ ಬಂಧಿತರು.
(ದಟ್ಸ್ ಕನ್ನಡ ವಾರ್ತೆ)
ಹುಡುಗಿಯರ ಥಳಿಸಿದ ರಾಮಸೇನಾ ಕಾರ್ಯಕರ್ತರು












Click it and Unblock the Notifications