Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ

ಬೆಂಗಳೂರು, ಜ. 20 : ಕರ್ನಾಟಕದಿಂದ ಭಾರತ ಅನ್ನುವ ಘೋಷ ವಾಕ್ಯದೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸದ್ದ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶಕ್ಕೆ ನಾಡಿನ ಜನರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು. ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಬೇಲಿ ಮಠದ ಶಿವರುದ್ರ ಮಹಾಸ್ವಾಮೀಜಿ ಹಾಗೂ ಗೋಸಾಯಿ ಮಠದ ಸುರೇಶ್ವರಾನಂದ ಭಾರತೀ ಸ್ವಾಮೀಜಿಯವರು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು.

ನಂತರ ನಡೆದ ಕನ್ನಡಿಗರ ಉದ್ಯೋಗ ಮತ್ತು ಉದ್ಯಮಶೀಲತೆ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಮೋಹನ್ ಆಳ್ವಾರವರು ಮಾತನಾಡಿ, ಕರ್ನಾಟಕ ಎದುರಿಸುತ್ತಿರುವ ಮೂಲಭೂತ ಸೌಕರ್ಯಗಳ ಕೊರತೆ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಅವು ಹೇಗೆ ಕನ್ನಡಿಗರ ಉದ್ಯಮಶೀಲತೆಯನ್ನು ಬಾಧಿಸುತ್ತಿದೆ ಎನ್ನುವುದನ್ನು ಮನಮುಟ್ಟುವಂತೆ ವಿವರಿಸಿದರು.

ಕನ್ನಡಿಗರ ಉದ್ಯೋಗ, ಉದ್ಯಮ, ಉದ್ದಿಮೆಗಾರಿಕೆಯ ಏಳಿಗೆಗೆ ಶಿಕ್ಷಣ, ಉದ್ದಿಮೆ ಇತ್ಯಾದಿ ಕ್ಷೇತ್ರಗಳಲ್ಲಿ ಸರ್ಕಾರ ಕಲ್ಪಿಸಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ, ತೆಗೆದುಕೊಳ್ಳಬೇಕಾದ ನಿಲುವಿನ ಬಗ್ಗೆ ಮಾತನಾಡಿದ ಅವರು, ರಾಜ್ಯದ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲದ ಸದ್ಭಳಕೆ ಬಗ್ಗೆ ನೀತಿ-ನಿಯಮಗಳನ್ನು ಜಾರಿಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಕರ್ನಾಟಕ ಗಟ್ಟಿಯಾದರೆ ದೇಶ ಗಟ್ಟಿಯಾದೀತು ಎನ್ನುವ ಅವರ ಮಾತಿಗೆ ಜನ ಚಪ್ಪಾಳೆ ಮೂಲಕ ಸಮ್ಮತಿ ಸೂಚಿಸಿದರು.

ಇವರ ನಂತರ ಮಾತನಾಡಿದ ವಿಶ್ರಾಂತ ಕುಲಪತಿ ಕೆ.ಚಿದಾನಂದ ಗೌಡ ಅವರು ಜಾಗತೀಕರಣದ ಸಮಯದಲ್ಲಿ ವಿಶ್ವ ಕನ್ನಡಿಗರ ಜಾಗೃತಿಕರಣ ಆಗಬೇಕಿದ್ದು, ಇವತ್ತಿನ ಶಿಕ್ಷಣ ವ್ಯವಸ್ಥೆ, ಜ್ಞಾನವನ್ನು ಕೇವಲ ಜ್ಞಾನಕ್ಕಾಗಿ ಕೊಟ್ಟಿದೆಯೇ ಹೊರತು, ಜ್ಞಾನ ಒಂದು ಸಂಪತ್ತನ್ನು ಸೃಷ್ಟಿಸುವ, ಉದ್ಯೋಗ ಸೃಷ್ಟಿಸುವ ಶಕ್ತಿಯಾಗಿಲ್ಲ, ಇದು ಬದಲಾದಾಗಲೇ ಕನ್ನಡದ ನೆಲದಿಂದ ಉದ್ಯಮಿಗಳು, ಉದ್ಯಮಗಳು ಹುಟ್ಟಲು ಸಾಧ್ಯವಾಗುವುದು ಎಂದರು. ಕನ್ನಡ ಉಳಿಸಿ, ಬೆಳೆಸುವ ಜೊತೆಗೆಯೇ, ಆಂಗ್ಲದಲ್ಲೂ ಓದಿ ಪರಿಣಿತಿ ಗಳಿಸಿ, ಅದನ್ನುಪಯೋಗಿಸಿ, ಕನ್ನಡಕ್ಕೆ ಲಾಭ ತಂದುಕೊಡಬೇಕು ಎಂದ ಅವರು ಕೊನೆಯಲ್ಲಿ, ಕರ್ನಾಟಕದ ಅಭಿವೃದ್ಧಿಗೆ 20 ಆಯಾಮಗಳನ್ನು ಪ್ರಸ್ತುತಪಡಿಸಿದರು. ಕೊನೆಯಲ್ಲಿ ಮಾತನಾಡಿದ ಕ.ರ.ವೇ ರಾಜ್ಯಾಧ್ಯಕ್ಷರು, ರಾಜ್ಯದಲ್ಲಿ ತಲೆಯೆತ್ತುವ ಹೊಸ ಉದ್ದಿಮೆಗಳು ಈ ನೆಲದ ಮಕ್ಕಳಿಗೆ ಉದ್ಯೋಗ ಕಲ್ಪಿಸಬೇಕು, ಕನ್ನಡಿಗರಲ್ಲಿ ಉದ್ದಿಮೆಗಾರಿಕೆಯನ್ನು ಪ್ರೋತ್ಸಾಹಿಸಲು ಕನ್ನಡದ ಉದ್ಯಮಿಗಳಿಗೆ ಕಡಿಮೆ ದರ ಸಾಲ, ತೆರಿಗೆ ವಿನಾಯಿತಿಯಂತಹ ಯೋಜನೆಗಳನ್ನು ರೂಪಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಊಟದ ವಿರಾಮದ ನಂತರ ನಡೆದ ಜನಪದೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಮನ ಸೂರೆಗೊಂಡವು. ಸಮಾರಂಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಲ್ಲೂರು ಪ್ರಸಾದ್, ಜಾಗೃತಿ ಸಮಾವೇಶವೇ ಜನಪದೋತ್ಸವ ಎಂದರಲ್ಲದೇ, ಜಾನಪದದ ಸೊಗಡಿನ ಬಗ್ಗೆ ಹಾಡಿನ ಮೂಲಕ ವಿವರಣೆ ನೀಡಿದರು. ಇದೇ ಸಂದರ್ಭದಲ್ಲಿ ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ಅವರು, ಕರವೇ ಹೊರ ತಂದಿರುವ ನಾಡಿನ ಜನಪದ ಸಂಸ್ಕೃತಿ ಬಿಂಬಿಸುವ ಸೀಡಿಯನ್ನು ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಜಾನಪದ ಕ್ಷೇತ್ರದ ಸಾಧನೆಗಾಗಿ "ಜಾನಪದ ಜಂಗಮ ಡಾ ಎಸ್.ಕೆ. ಕರೀಂ ಖಾನ್" ಪ್ರಶಸ್ತಿಯನ್ನು ಜಾನಪದ ತಜ್ಞ ಡಾ ಎಮ್.ಎನ್. ವಾಲಿಯವರಿಗೂ ಹಾಗೂ ರೈತಪರ ಹೋರಾಟಕ್ಕಾಗಿ " ಪ್ರೊ.ಎಮ್.ಡಿ. ನಂಜುಂಡಸ್ವಾಮಿ" ಪ್ರಶಸ್ತಿಯನ್ನು ರೈತಪರ ಹೋರಾಟಗಾರರಾದ ಸಿದ್ಧವೀರಪ್ಪ ಈಚಗಟ್ಟರವರಿಗೂ ನೀಡಿ ಸನ್ಮಾನಿಸಲಾಯಿತು.

KARAVE World kannadigas awareness meet in Bengaluru.
"ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ" ಎಂಬ ಹಾಡಿಗೆ ಶಿವ ಪ್ರಿಯಾ ತಂಡದ ನೃತ್ಯದ ಮೂಲಕ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಸಮಾರಂಭದಲ್ಲಿ ಉಪಸ್ಥಿತರಿದ್ದ ನಾಡಿನ ಮುಖ್ಯಮಂತ್ರಿ ಡಾ ಬಿ.ಎಸ್.ಯಡಿಯೂರಪ್ಪನವರು ಕನ್ನಡಕ್ಕೆ ಶಾಸ್ತ್ರಿಯ ಭಾಷೆಗೆ ಹೋರಾಡಿದ ಕರ್ನಾಟಕ ರಕ್ಷಣಾ ವೇದಿಕೆಯನ್ನು ಅಭಿನಂದಿಸಿದರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವ ವೇದಿಕೆಯ ಮಾತನ್ನು ಅನುಮೋದಿಸಿದರು. ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ನಂಜುಂಡಪ್ಪ ವರದಿ ಅನುಷ್ಟಾನಕ್ಕೆ ಪ್ರಯತ್ನಿಸುವುದಾಗಿ ಇದೇ ಸಂದರ್ಭದಲ್ಲಿ ಅವರು ಭರವಸೆ ನೀಡಿದರು.

ಸಮಾವೇಶದ ನಿರ್ಣಯಗಳು

1. ಉತ್ತಮವಾದ ಪರಿಣಾಮಕಾರಿಯಾದ ಆಡಳಿತಕ್ಕಾಗಿ, ಕೇಂದ್ರದ ಹಿಡಿತದಿಂದ ಕರ್ನಾಟಕಕ್ಕೆ ಹೆಚ್ಚಿನ ಅಧಿಕಾರ ವಿಕೇಂದ್ರೀಕರಣ ಆಗಬೇಕು.
2. ಅಂತರರಾಜ್ಯ ವಲಸೆ ನಿಯಂತ್ರಣ ಕಾಯ್ದೆ ಜಾರಿಯಾಗಲಿ.
3. ಹೊರನಾಡ ಕನ್ನಡಿಗರಿಗೆ, ಕನ್ನಡನಾಡಿನ ಪರಭಾಷಿಕರಿಗೆ ಸಿಗುವ ಸವಲತ್ತುಗಳು ಸಿಗಬೇಕು.
4. ಭಾರತದ ಎಲ್ಲಾ ಭಾಷೆಗಳನ್ನೂ ಸಮನಾಗಿ ಕಾಣುವ ರಾಷ್ಟ್ರೀಯ ಭಾಷಾನೀತಿ ರೂಪುಗೊಳ್ಳಲಿ.
5. ಗಣಿಗಾರಿಕೆ ರಾಯಲ್ಟಿಯ ಅತಿಹೆಚ್ಚು ಪಾಲು ರಾಜ್ಯಕ್ಕೇ ದೊರೆಯಬೇಕು.
6. ಕರ್ನಾಟಕಕ್ಕೆ ಸಂಪನ್ಮೂಲ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯ ಕೊನೆಯಾಗಲಿ.
7. ಅಂತರರಾಜ್ಯ ನದಿನೀರು ತಗಾದೆ ಬಗೆಹರಿಸಲು ರಾಷ್ಟ್ರೀಯ ಜಲನೀತಿ ರೂಪಿತವಾಗಲಿ.
8. ಶಾಸ್ತ್ರೀಯ ಕನ್ನಡದ ಅಧ್ಯಯನಕ್ಕೊಂದು ವಿಶ್ವವಿದ್ಯಾಲಯ ಕಟ್ಟಲಿ.
9. ಕನ್ನಡದ ಕಲಿಕೆ ಉನ್ನತ ವ್ಯಾಸಂಗಕ್ಕೂ ವಿಸ್ತರಿಸಲು ಇಂದೇ ಯೋಜನೆಗಳನ್ನು ರೂಪಿಸಬೇಕು.
10. ನಾಡಿನ ಎಲ್ಲ ಕಲಿಕಾಕೇಂದ್ರಗಳಲ್ಲಿ ಕನ್ನಡ ಕಲಿಕೆ ಕಡ್ಡಾಯವಾಗಬೇಕು.
11. ರಾಜ್ಯಸರ್ಕಾರ ಕಲಿಕೆಯಲ್ಲಿ ತ್ರಿಭಾಷಾ ಸೂತ್ರವನ್ನು ಕೈಬಿಟ್ಟು ದ್ವಿಭಾಷಾ ಸೂತ್ರವನ್ನು ಜಾರಿಗೊಳಿಸಬೇಕು.
12. ಕನ್ನಡನಾಡಿನ ಆಡಳಿತ ಸಂಪೂರ್ಣವಾಗಿ ಕನ್ನಡದಲ್ಲಾಗಬೇಕು.
13. ನಾಡದ್ರೋಹಿಗಳನ್ನು ಮಟ್ಟಹಾಕಲು ಬಿಗಿ ಭದ್ರತಾ ಕಾಯ್ದೆ ರೂಪಿಸಬೇಕು.
14. ಮಹಾಜನ ಯಥಾವತ್ತಾಗಿ ವರದಿ ಜಾರಿಯಾಗಲಿ.
15. ಹೊಗೇನಕಲ್ ಗಡಿ ತಂಟೆ ನಿವಾರಿಸಲು ಸೂಕ್ತಕ್ರಮಕ್ಕೆ ಮುಂದಾಗಬೇಕು.
16. ಗಣಿಗಾರಿಕೆಯ ನೆಪದಲ್ಲಿ ಕನ್ನಡಿಗರ ನೆಲ ಕಬಳಿಸಿ ಲೂಟಿಗೈಯ್ಯುತ್ತಿರುವ ಶಕ್ತಿಗಳನ್ನು ಹತ್ತಿಕ್ಕಲು ತಕ್ಕ ಕ್ರಮ ಕೈಗೊಳ್ಳಬೇಕು.
17. ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಮದ್ದಾದ ಡಾ. ನಂಜುಂಡಪ್ಪ ವರದಿ ಜಾರಿಗೆ ಬರಲಿ.
18. ಬಡಗಣ ಕರ್ನಾಟಕದ ("ಹೈದರಾಬಾದ್ ಕರ್ನಾಟಕ" ಎಂದು ಕರೆಯುವುದು ಸರಿಯಲ್ಲ) ಏಳಿಗೆಗೆ ಪೂರಕವಾಗಿರುವ 371ನೇ ವಿಧಿಯನ್ವಯ ಆ ಭಾಗಗಳಿಗೆ ವಿಶೇಷ ಸ್ಥಾನಮಾನ ಘೋಷಿಸಬೇಕು.
19. ಭ್ರಷ್ಟಾಚಾರ ಕೊನೆಗೊಳಿಸಲು ಬಿಗಿ ಕಾನೂನು ರೂಪಿಸಬೇಕು.
20. ನಾಡಿನ ನಗರಗಳನ್ನು ಜೋಡಿಸುವ ರಸ್ತೆ, ರೈಲು ವಿಮಾನ ಸಂಪರ್ಕ ಜಾಲಗಳನ್ನು ಆದ್ಯತೆಯ ಮೇಲೆ ಕಟ್ಟಬೇಕು.
21. ನೆನೆಗುದಿಗೆ ಬಿದ್ದಿರುವ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಜಾರಿಗೆ ತರಬೇಕು.
22. ಕನ್ನಡಿಗರಿಗೆ ಕೆಲಸ ಖಾತ್ರಿ ಪಡಿಸುವ ಡಾ.ಸರೋಜಿನಿ ಮಹಿಷಿ ವರದಿ ಜಾರಿಯಾಗಲಿ.
23. ಕರ್ನಾಟಕದಲ್ಲಿ ಕೆಲಸ ಮಾಡುವ ಕೇಂದ್ರಸರ್ಕಾರಿ ಕಛೇರಿಗಳ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.91 ಮೀಸಲಾತಿ ಕೊಡಬೇಕು.
24. ಕೇಂದ್ರ ಸರ್ಕಾರ ನಡೆಸುವ ನೇಮಕಾತಿ ಪರೀಕ್ಷೆಗಳು ಕನ್ನಡದಲ್ಲಿ ಇರಲೇಬೇಕು.
25. ಕರ್ನಾಟಕ ರಾಜ್ಯ ಸರ್ಕಾರದ ಕೆಲಸಗಳಲ್ಲಿ ಶೇ.100 ಕನ್ನಡಿಗರಿಗೇ ಸಿಗಬೇಕು.
26. ಕನ್ನಡಿಗರಲ್ಲಿ ಉದ್ದಿಮೆಗಾರಿಕೆ ಉತ್ತೇಜಿಸಲು ಮೂಲಧನ ನೀಡುವ ವ್ಯವಸ್ಥೆ ರೂಪುಗೊಳ್ಳಲಿ.
27. ಕನ್ನಡದಲ್ಲಿ ಗ್ರಾಹಕ ಸೇವೆ ನಿರಾಕರಿಸುವುದು ಶಿಕ್ಷಾರ್ಹ ಅಪರಾಧವೆನ್ನುವ ಕಾಯ್ದೆ ಜಾರಿಯಾಗಲಿ.
28. ಸಂಕಷ್ಟದಲ್ಲಿರುವ ಕನ್ನಡ ನಾಡಿನ ಎಲ್ಲ ರೈತ, ಕಾರ್ಮಿಕ, ನೇಕಾರ ಕುಟುಂಬಗಳಿಗೆ ಸೂಕ್ತವಾದ ಪರಿಹಾರವನ್ನು ಸಕಾಲದಲ್ಲಿ ವಿತರಿಸಬೇಕು.
29. ಕರ್ನಾಟಕದಲ್ಲಿ ರೂಪಿಸಲಿರುವ ಅಭಯಾರಣ್ಯಗಳ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸಬಾರದು ಮತ್ತು ಸೂಕ್ತಪರಿಹಾರ ನೀಡಬೇಕು.
30. ಪ್ರವಾಸೋದ್ಯಮದ ಬೆಳವಣಿಗೆಗೆ ಆದ್ಯತೆ ನೀಡಿ ಸ್ಥಳೀಯ ಕನ್ನಡಿಗರ ಸಹಭಾಗಿತ್ವದಲ್ಲಿ ಲಾಭದಾಯಕ ಉದ್ದಿಮೆಯಾಗಿ ರೂಪಿಸಲು ಯೋಜನೆಗಳನ್ನು ಮಾಡಬೇಕು.
31. ಕನ್ನಡ ನಾಡಿನ ಊರು, ಕೇರಿ, ಬೀದಿಗಳು, ಅಣೆಕಟ್ಟೆಗಳೂ ಸೇರಿದಂತೆ ಎಲ್ಲಾ ತೆರನಾದ ಯೋಜನೆಗಳು, ಸ್ಮಾರಕಗಳಿಗೆ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಸಂಬಂಧಿಸಿದ ಹೆಸರುಗಳನ್ನು ಮಾತ್ರ ಇಡಬೇಕು. ಪರಂಪರೆಯಿಂದ ಬಂದಿರುವ ಹಳೆಯ ಮೂಲಹೆಸರುಗಳನ್ನೇ ಆದಷ್ಟೂ ಅಧಿಕೃತಗೊಳಿಸಬೇಕು.
32. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡಬೇಕು. ಜೊತೆಯಲ್ಲೇ ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ ವಿಮಾನ ನಿಲ್ದಣವೆಂದೂ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ ವಿಮಾನ ನಿಲ್ದಾಣವೆಂದೂ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ವಿಮಾನನಿಲ್ದಾಣವೆಂದೂ ಹೆಸರಿಡಬೇಕು.
33. ವಿಜಾಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ವಿಶ್ವವಿದ್ಯಾಲಯವೆಂಬ ಹೆಸರಿಡಬೇಕು.
34. ಕೊಡಗು ಜಿಲ್ಲೆಯನ್ನು ರೈಲುಮಾರ್ಗದಿಂದ ಸಜ್ಜುಗೊಳಿಸಿ ಅಲ್ಲಿ ಉದ್ದಿಮೆಗಾರಿಕೆಗೆ ಉತ್ತೇಜನ ನೀಡುವ ಯೋಜನೆ ಮಾಡಬೇಕು.
35. ಈಗಾಗಲೇ ಇರುವ ಉನ್ನತ ಕಲಿಕಾ ಕೇಂದ್ರಗಳಾದ ಭಾರತೀಯ ವಿಜ್ಞಾನ ಸಂಸ್ಥೆ, ಕೃಷಿ ವಿದ್ಯಾಲಯವೂ ಸೇರಿದಂತೆ ನಾಡಿನ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣದ ಲಾಭ ಕನ್ನಡಿಗರಿಗೇ ಆದ್ಯತೆಯ ಮೇರೆಗೆ ದೊರೆಯಬೇಕು.
36. ಕನ್ನಡ ನಾಡಿನ ಸಂಸ್ಕೃತಿಯ ಪ್ರತೀಕಗಳಾದ ಜಾನಪದ, ಯಕ್ಷಗಾನ, ರಂಗಭೂಮಿ ಕಲೆಗಳ ಉಳಿವು ಮತ್ತು ಏಳಿಗೆಗಾಗಿ ಸಂಬಂಧಿಸಿದ ಅಕಾಡಮಿಗಳನ್ನು ಪುನಶ್ಚೇತನಗೊಳಿಸಬೇಕು. ಪ್ರತಿಭಾನ್ವಿತ ಜಾನಪದ ಕಲಾವಿದರಿಗೆ ಮಾಸಾಶನ ನೀಡಬೇಕು.
37. ಮಹಿಳೆಯರ ಸಬಲೀಕರಣಕ್ಕೆ ಪೂರಕವಾದ ಸ್ತ್ರೀ ಶಕ್ತಿ ಯೋಜನೆಯನ್ನು ಬಲಪಡಿಸಬೇಕು.
38. ರಾಷ್ಟ್ರೀಯ ಆಟದ ತಂಡಗಳಲ್ಲಿ ಕನ್ನಡದ ಆಟಗಾರರಿಗೆ ಅನ್ಯಾಯವಾಗದಂತೆ ಎಚ್ಚರವಹಿಸಬೇಕು ಮತ್ತು ಆಯಾ ಕ್ರೀಡಾಸಂಸ್ಥೆಗಳಲ್ಲಿ ಕನ್ನಡಿಗ ಪ್ರತಿನಿಧಿಗಳು ಇರಬೇಕು.
39. ಬೆಳಗಾವಿಯಲ್ಲಿ ನಿರ್ಮಾಣವಾಗುತ್ತಿರುವ ಸುವರ್ಣ ವಿಧಾನಸೌಧವನ್ನು ಶೀಘ್ರವಾಗಿ ಪೂರೈಸಬೇಕು.
40. ಕರ್ನಾಟಕದ ಏಕೈಕ ಕಾನೂನು ವಿಶ್ವವಿದ್ಯಾಲಯದ ವಿಸ್ತೃತ ಕೇಂದ್ರವನ್ನು ಉತ್ತರ ಕರ್ನಾಟಕದಲ್ಲೂ ತೆರೆಯಬೇಕು.
41. ಕರಾವಳಿ ಜಿಲ್ಲೆಗಳ ಆದಾಯದ ಮೂಲವಾದ ಮೀನುಗಾರಿಕೆಯ ಉತ್ತೇಜನಕ್ಕೆ ಮತ್ತು ಮೀನುಗಾರರ ರಕ್ಷಣೆಗೆ ಕಡಿಮೆ ಬಡ್ದಿದರದಲ್ಲಿ ಸಾಲನೀಡುವ ಮತ್ತು ಅವರ ಬದುಕಿನ ಭದ್ರತೆಗೆ ಸೂಕ್ತ ವಿಮೆಯನ್ನು ಸರ್ಕಾರ ಕೊಡಬೇಕು.
42. ಕನ್ನಡ ನಾಡಿನ ವಿಶಿಷ್ಟ ಜನಾಂಗಗಳಾದ ಹಾಲಕ್ಕಿಯವರೂ, ಸೋಲಿಗರೂ ಸೇರಿದಂತೆ ಎಲ್ಲ ಜನಾಂಗಗಳು, ತಮ್ಮ ಮೂಲನೆಲೆಯನ್ನು ಕಳೆದುಕೊಳ್ಳದಂತೆ ಸರ್ವತೋಮುಖ ಏಳಿಗೆಗೆ ಯೋಜನೆಗಳನ್ನು ರೂಪಿಸಬೇಕು.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+