ಬಿಜೆಪಿ ಸದಸ್ಯತ್ವಕ್ಕೆ ಕಲ್ಯಾಣ ಸಿಂಗ್ ರಾಜೀನಾಮೆ
ನವದೆಹಲಿ, ಜ. 20 : ಭಾರತೀಯ ಜನತಾ ಪಕ್ಷದ ಹೈಕಮಾಂಡ್ ಮೇಲೆ ತೀವ್ರವಾಗಿ ಮುನಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಇಂದು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಕಲ್ಯಾಣ ಸಿಂಗ್ ಅವರು ಪುತ್ರ ರಜ್ಬೀರ್ ಸಿಂಗ್ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದರು. ಕಲ್ಯಾಣ ಸಿಂಗ್ ಕೂಡ ಅದೇ ದಾರಿಯಲ್ಲಿ ಸಾಗುವ ಲಕ್ಷಣಗಳಿದ್ದು, ಕಳೆದ ಅನೇಕ ದಿನಗಳಿಂದ ಹುಟ್ಟಿಕೊಂಡಿದ್ದ ಸುದ್ದಿಗಳಿಗೆ ಇಂದು ಸ್ಪಷ್ಟ ಉತ್ತರ ದೊರೆತಂತಾಯಿತು.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಆಗಿರುವ ಕಲ್ಯಾಣ ಸಿಂಗ್ ಅವರು ಹೈಕಮಾಂಡ್ ನೊಂದಿಗೆ ಮುನಿಸಿಕೊಂಡು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದರು. ಅಲ್ಲದೇ ಪಕ್ಷದ ನಾಯಕರು ತಮ್ಮ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ತಮ್ಮ ಮಾತಿಗೆ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ ಎನ್ನುವುದು ಕಲ್ಯಾಣ ಸಿಂಗ್ ಅವರು ಆರೋಪವಾಗಿತ್ತು.
ಇದರ ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬುಲಂದಶಹರ್ ಕ್ಷೇತ್ರದಿಂದ ಅಶೋಕ್ ಪ್ರಧಾನ ಅವರನ್ನು ಬಿಜೆಪಿ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದು ಕಲ್ಯಾಣ ಸಿಂಗ್ ಅಸಮಾಧಾನ ಮತ್ತಷ್ಟು ತುಪ್ಪ ಸುರಿದಂತಾಯಿತು. ಏಕೆಂದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಶೋಕ್ ಪ್ರಧಾನ ತಮ್ಮ ಪುತ್ರ ರಜ್ಬೀರ್ ಸಿಂಗ್ ವಿರುದ್ಧ ಕೆಲಸ ಮಾಡಿ ಪಕ್ಷಕ್ಕೆ ದ್ರೋಹ ಎಸಗಿದ್ದ, ಆದರೂ ಪಕ್ಷ ನಾಯಕರು ಆತನಿಗೆ ಮಣೆ ಹಾಕಿರುವುದು ಕಲ್ಯಾಣ ಸಿಂಗ್ ಪಕ್ಷ ತೊರೆಯಲು ಮುಖ್ಯ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications